ಉಪ್ಪಳ: ಹೆದ್ದಾರಿ ಕಾಮಗಾರಿಯಿಂದಾಗಿ ಬಸ್ ನಿಲ್ದಾಣ ಪ್ರವೇಶಿಸದ ಬಸ್ಸುಗಳು: ಸಾರ್ವಜನಿಕರ ಪರದಾಟ..!

Share with

ಉಪ್ಪಳ: ಉಪ್ಪಳ ಪೇಟೆಯಲ್ಲಿ ಹೆದ್ದಾರಿ ಕಾಮಗಾರಿ ಭರದಿಂದ ನಡೆಯುತ್ತಿರುವಂತೆ ಬಸ್ ನಿಲ್ದಾಣಕ್ಕೆ ಬಸ್‌ಗಳು ಪ್ರವೇಶಿಸಲು ಸಮಸ್ಯೆ ಉಂಟಾಗುತ್ತಿರುವುದಾಗಿ ದೂರಲಾಗಿದೆ. ಸರಕಾರಿ ಬಸ್‌ಗಳು ನಿಲ್ದಾಣ ಪ್ರವೇಶಿಸದೆ ಹೆದ್ದಾರಿ ಬದಿಯಲ್ಲಿಯೇ ನಿಲುಗಡೆಗೊಳ್ಳುತ್ತಿರುವುದು ಸಾರ್ವಜನಿಕರನ್ನು ಸಂಕಷ್ಟಕ್ಕೀಡು ಮಾಡಿದೆ.

ಮಂಗಳೂರು-ಕಾಸರಗೋಡು ಭಾಗಕ್ಕೆ ಸಂಚರಿಸುವ ಕರ್ನಾಟಕ ಹಾಗೂ ಕೇರಳ ಸಾರಿಗೆ ಬಸ್‌ಗಳು ಹೆದ್ದಾರಿಯಲ್ಲಿ ನಿಲುಗಡೆಗೊಳಿಸಲಾಗುತ್ತಿರುವುದರಿಂದ ಮಕ್ಕಳು, ಮಹಿಳೆಯರು, ವೃದ್ದರು ಸಹಿತ ಪ್ರಯಾಣಿಕರು ಹೆದ್ದಾರಿ ಬದಿಯಲ್ಲಿ ಬಿಸಿಲಿನಲ್ಲಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಕೆಲವು ಮಂದಿ ಬಸ್ ನಿಲ್ದಾಣದಿಂದ ಬಸ್‌ಗಾಗಿ ಹೆದ್ದಾರಿಗೆ ಓಡುವಂತ ಪರಿಸ್ಥಿತಿ ಇದ್ದು, ಪ್ರಯಾಣಿಕರು ಬಸ್ ಹಿಡಿಯಲು ಪರದಾಡುವಂತಾಗಿದೆ. ಉಪ್ಪಳ ಬಸ್ ನಿಲ್ದಾಣದಿಂದ ಪೇಟೆ ತನಕ ಫ್ಲೈ ಓವರ್ ಕಾಮಗಾರಿ ಭರದಿಂದ ನಡೆಯುತ್ತಿರುವ ಹಿನ್ನಲೆಯಲ್ಲಿ ಪೇಟೆಯಲ್ಲಿ ವಾಹನಗಳ ದಟ್ಟಣೆಯಿಂದ ವಾಹನ ಸವಾರರರು ಸಮಸ್ಯೆಗೀಡಾಗುತ್ತಿದ್ದಾರೆ.

ಹೆದ್ದಾರಿಯಿಂದ ಬಸ್ ನಿಲ್ದಾಣ ಪ್ರವೇಶಿಸುವಲ್ಲಿ ನಾಮಫಲಕ ಇಲ್ಲದಿರುವುದು ಅಪಘಾತಕ್ಕೆ ಕಾರಣವಾಗಿದೆ ಎಂದು ದೂರಲಾಗಿದೆ. ಉಪ್ಪಳ ಬಸ್ ನಿಲ್ದಾಣ ಇಕ್ಕಟ್ಟಾಗಿದ್ದು, ಬಸ್‌ನ್ನು ತಿರುಗಿಸಲು ಸಾಹಸಪಡಬೇಕಾಗಿದೆ. ಸರಕಾರಿ ಬಸ್‌ಗಳು ನಿಲ್ದಾಣ ಪ್ರವೇಶಿಸುವಂತೆ ಬಸ್ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಮುತುವರ್ಜಿ ವಹಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


Share with

Leave a Reply

Your email address will not be published. Required fields are marked *