ಬಂಟ್ವಾಳ: ಹಲವು ದಶಕಗಳ ಕಾಲ ಯಕ್ಷ ರಂಗದ ಹಾಸ್ಯ ಲೋಕವನ್ನು ಆಳಿದ ಮೇರು ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಅವರು ಪರಂಪರೆಯ ಛಾಯೆಯನ್ನು ಬಿಡದೆ ಈಗಿನ ತಲೆಮಾರಿಗೆ ಒಗ್ಗುವಂಥ ಆರೋಗ್ಯ ಪೂರ್ಣ ಹಾಸ್ಯವನ್ನು ಸಮಾಜಕ್ಕೆ ತಲುಪಿಸಿದ ಹೆಗ್ಗಳಿಕೆ ಹೊಂದಿದ್ದು, ಅವರ ಅಗಲುವಿಕೆ ಯಕ್ಷಗಾನ ರಂಗಕ್ಕೆ ದೊಡ್ಡ ನಷ್ಟ. ಕೆಲವು ಪ್ರಸಂಗ-ಪಾತ್ರಗಳಿಗೆ “ಜಯರಾಮಣ್ಣನೇ ಬೇಕು’ ಎಂಬಂಥ ಬೇಡಿಕೆಯ ಕಲಾವಿದರಾಗಿದ್ದರು.
ಎಂದಿಗೂ ಹಾಸ್ಯದಲ್ಲಿ ಯಕ್ಷ ಪರಂಪರೆಯನ್ನು ಮೀರಿದವರಲ್ಲ. ಹಾಗಂತ ಅದೇ ಹಿಂದಿನ ಹಳೆಯ ಹಾಸ್ಯವನ್ನೇ ನೀಡುತ್ತಿದ್ದವರೂ ಅಲ್ಲ. ಈಗಿನ ಸಮುದಾಯಕ್ಕೂ ಹಿತವಾಗುವ ಹಾಸ್ಯವನ್ನು ತಲುಪಿಸುತ್ತಿದ್ದು, ಹೀಗಾಗಿ ಜಯರಾಮಣ್ಣರ ಹಾಸ್ಯವನ್ನು ಪ್ರೇಕ್ಷಕರು ಯಾವತ್ತೂ ಸ್ವೀಕರಿಸುತ್ತಿದ್ದರು. ಅವರ ಹಾಸ್ಯದಲ್ಲಿ ಸಮಾಜಕ್ಕೆ ಉತ್ತಮ ಸಂದೇಶವೂ ಇತ್ತು ಎಂದೂ ರಂಗದಲ್ಲಿ ರಾಜಕೀಯ ಮಾತನಾಡಿದವರಲ್ಲ.