ಕುಂದಾಪುರ: ಕೋಡಿಯ ಕಡಲ ಕಿನಾರೆಗಿಳಿದ ಮೂವರ ಸಹೋದರರ ಪೈಕಿ ಇಬ್ಬರು ನೀರುಪಾಲಾಗಿದ್ದು, ಓರ್ವನನ್ನು ಸ್ಥಳೀಯರು ರಕ್ಷಿಸಿದ ಘಟನೆ ಶನಿವಾರ(ಡಿ.7) ಸಂಭವಿಸಿದೆ.

ಅಂಪಾರು ಮೂಡುಬಗೆಯ ನಿವಾಸಿ ದಾಮೋದರ ಪ್ರಭು ಹಾಗೂ ಚಿತ್ರಕಲಾ ಪ್ರಭು ದಂಪತಿಯ ಪುತ್ರರಾದ ಧನರಾಜ್ (23) ಹಾಗೂ ದರ್ಶನ್ (18) ಸಾವನ್ನಪ್ಪಿದವರು. ಇನ್ನೋರ್ವ ಪುತ್ರ ಧನುಷ್ (20) ಎಂಬಾತನನ್ನು ಸ್ಥಳೀಯರು ರಕ್ಷಿಸಿ, ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತ ಪ್ರಾಣಾಪಾಯದಿಂದ ಪಾರಾಗಿರುವು ದಾಗಿ ತಿಳಿದು ಬಂದಿದೆ.

ಘಟನೆ ವಿವರ
ಶನಿವಾರ ರಜಾ ದಿನವಾಗಿದ್ದರಿಂದ ಸಹೋದರರು ಮನೆಯವರೊಂದಿಗೆ ಕೋಡಿ ಬೀಚ್ಗೆ ಬಂದಿದ್ದರು. ಈ ವೇಳೆ ಕಡಲಿನ ನೀರಿನಲ್ಲಿ ಆಡುತ್ತಿದ್ದಾಗ ಆಕಸ್ಮಿಕ ವಾಗಿ ಅಲೆಗಳ ಅಬ್ಬರಕ್ಕೆ ಸಹೋದರರು ನೀರಲ್ಲಿ ಕೊಚ್ಚಿ ಹೋಗುತ್ತಿದ್ದರು. ಕೂಡಲೇ ಧನುಷ್ನನ್ನು ಸ್ಥಳದಲ್ಲಿದ್ದವರು ರಕ್ಷಿಸಿದ್ದಾರೆ. ಧನರಾಜ್ನನ್ನು ಕೂಡ ನೀರಿನಿಂದ ಮೇಲೆತ್ತಿದರಾದರೂ ಆತ ಸಾವನ್ನಪ್ಪಿದ್ದ. ನೀರುಪಾಲಾಗಿದ್ದ ಕಿರಿಯ ದರ್ಶನ್ನ ಶವ ಸ್ವಲ್ಪ ಹೊತ್ತಿನ ಬಳಿಕ ಸನಿಹದಲ್ಲೇ ಪತ್ತೆಯಾಯಿತು.ಯುವಕರ ತಂದೆ ದಾಮೋದರ ಪ್ರಭು ರಿಕ್ಷಾ ಚಾಲಕರಾಗಿದ್ದು, ತಾಯಿ ಚಿತ್ರಕಲಾ ಅವರು ಮನೆಯಲ್ಲೇ ಸಣ್ಣ ಅಂಗಡಿ ಇಟ್ಟುಕೊಂಡಿದ್ದಾರೆ. ಇವರು ಮೂವರು ಪುತ್ರರನ್ನು ಚೆನ್ನಾಗಿ ಓದಿಸುವ ಕನಸು ಕಂಡಿದ್ದರು. ಹಿರಿಯ ಪುತ್ರ ಧನರಾಜ್ ಅವರು ಸಾಫ್ಟ್ವೇರ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು, ಪ್ರಸ್ತುತ ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದರು. ಧನುಷ್ ಸುರತ್ಕಲ್ ಎನ್ ಐಟಿಕೆಯಲ್ಲಿ ಎಂಜಿನಿಯರಿಂಗ್ ಓದುತ್ತಿದ್ದರು. ಕಿರಿಯ ಪುತ್ರ ದರ್ಶನ್ ಕುಂದಾಪುರದ ಜೂನಿಯರ್ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಯಾಗಿದ್ದ ಎಂದು ಹೇಳಲಾಗಿದೆ .




