
ಬೆಂಗಳೂರು, ಡಿಸೆಂಬರ್ 14: ಸೈಬರ್ ವಂಚನೆ (Cyber crime) ಪ್ರಕರಣಗಳ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರು ಜನರು ವಂಚನೆಗೊಳಗಾಗುತ್ತಿದ್ದಾರೆ. ಸದ್ಯ ಇಂತಹದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ. ನಗರದಲ್ಲಿ ನೆಲೆಸಿರುವ ಮುಂಬೈ ಮೂಲದ ವೃದ್ಧರೊಬ್ಬರಿಗೆ ಬೆದರಿಕೆ ಹಾಕುವ ಮೂಲಕ 1. 94 ಕೋಟಿ ರೂ. ಹಣವನ್ನು ಖದೀಮರು ವಂಚಿಸಿದ್ದಾರೆ. ಆಗ್ನೇಯ ವಿಭಾಗದ ಸೈಬರ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಾಟ್ಸ್ ಆ್ಯಪ್ ಕಾಲ್ ಮಾಡಿ ವಂಚನೆ
ವಂಚಕರು ಪೊಲೀಸ್ ಅಧಿಕಾರಿಯ ಬಟ್ಟೆ ಹಾಗೂ ಠಾಣೆ ಮಾದರಿಯಲ್ಲಿ ಕೋಣೆಯನ್ನು ಸಿದ್ದಮಾಡಿಕೊಂಡಿದ್ದಾರೆ. ಕಳೆದ ನವೆಂಬರ್ನಲ್ಲಿ ವೃದ್ಧಗೆ ವಾಟ್ಸ್ ಆ್ಯಪ್ ಕಾಲ್ ಮಾಡಿದ್ದ ವಂಚಕರು, ಮುಂಬೈ ಕ್ರೈಂ ಬ್ರಾಂಚ್ ಪೊಲೀಸ್ ಎಂದು ಸಂಭಾಷಣೆ ಆರಂಭಿಸಿದ್ದಾರೆ. ವಿಡಿಯೋ ಕಾಲ್ ದೃಶ್ಯ ನೋಡಿ ಅಸಲಿ ಅಧಿಕಾರಿಗಳಿರಬಹುದು ಎಂದು ವೃದ್ಧ ನಂಬಿದ್ದಾರೆ.
ಈ ವೇಳೆ ಉದ್ಯಮಿ ನರೇಶ್ ಗೋಯಲ್ ಮನಿಲ್ಯಾಂಡರಿಂಗ್ ಪ್ರಕರಣದಲ್ಲಿ ತಮ್ಮ ಪಾತ್ರವಿರುವ ಸಂಗತಿ ಪತ್ತೆಯಾಗಿದೆ. ಹವಾಲ ತನಿಖೆ ವೇಳೆ 247 ಸಿಮ್ಗಳು ವಶಕ್ಕೆ ಪಡೆಯಲಾಗಿತ್ತು. ಆ ಪೈಕಿ ಒಂದು ನಿಮ್ಮ ಸಿಮ್ ಎಂದು ವೃದ್ಧನಿಗೆ ಆತಂಕ ಸೃಷ್ಟಿಸಿದ್ದಾರೆ. ಆತನ ಜೊತೆ ಭಾಗಿಯಾಗಿ ಕಮಿಷನ್ ಪಡೆದುಕೊಂಡಿದ್ದೀರಾ ಎಂದು ತನಿಖೆ ಹಂತದಲ್ಲಿ ತಿಳಿದುಬಂದಿದೆ. ಪ್ರಕರಣದಲ್ಲಿ ನೇರ ಪಾತ್ರ ಹೊಂದಿದ್ದೀರಾ ನಿಮ್ಮ ವಿಚಾರಣೆ ಅಗತ್ಯ. ಹೀಗಾಗಿ ಮುಂಬೈ ಅಪರಾಧ ವಿಭಾಗಕ್ಕೆ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿದ್ದಾರೆ.
ಈ ವೇಳೆ ಹೆದರಿದ ವೃದ್ಧನಿಗೆ ತಾವೇ ಪರ್ಯಾಯ ಮಾರ್ಗವಾಗಿ ವಂಚನೆ ಜಾಲ ಬೀಸಿದ್ದಾರೆ. ಆ ಬಳಿಕ ಹೌಸ್ ಅರೆಸ್ಟ್ ಆಗುವಂತೆ ತಿಳಿಸಿದ್ದಾರೆ. ವೃದ್ಧನಿಂದ ಬಲವಂತವಾಗಿ ವೈಯಕ್ತಕ ಮಾಹಿತಿ ಸಂಗ್ರಹಿಸಿದ ದುಷ್ಕರ್ಮಿಗಳು, ನಂತರ ಏಳು ದಿನಗಳಲ್ಲಿ ಹಲವು ಕಂತಿನಲ್ಲಿ ಹಣ ಕಳುಹಿಸುವಂತೆ ಒತ್ತಾಯಿಸಿದ್ದಾರೆ. ಅದೇ ಮಾದರಿಯಲ್ಲಿ ಒಟ್ಟು 1. 94 ಕೋಟಿ ರೂ. ಹಣ ಪಡೆದುಕೊಂಡಿದ್ದಾರೆ. ಬಳಿಕ ಈ ವಿಚಾರ ಯಾರ ಜೊತೆಯೂ ಚರ್ಚಿಸದಂತೆ ಸೂಚಿಸಿದ್ದಾರೆ.




