ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿರೋಲ್ ತಾಲೂಕಿನ ಜನರು ಅಂಬಾನಿ ಹಾಗೂ ಅವರ ಸಂಸ್ಥೆ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಪ್ರತಿಭಟನೆಯ ಆರಂಭಿಕ ಹಂತವಾಗಿ ಜಿಯೋಗೆ ಗುಡ್ಬೈ ಹೇಳಿ ಪೋರ್ಟ್ ಆಗ್ತಿದ್ದಾರೆ. ಹಂತ-ಹಂತವಾಗಿ ಅಂಬಾನಿ ಒಡೆತದನ ಎಲ್ಲಾ ಸಂಸ್ಥೆಗಳಿಗೂ ಬಾಯ್ಕಾಟ್ ಹೇಳಲು ನಿರ್ಧರಿಸಿದ್ದಾರೆ. ಇಷ್ಟಕ್ಕೆಲ್ಲ ಕಾರಣ ಮಹಾದೇವಿ ಅನ್ನೋ ಆನೆ! ಆ ಆನೆ ಮೇಲಿನ ಪ್ರೀತಿ ಮತ್ತು ಆ ಮೂಕಪ್ರಾಣಿ ಜೊತೆಗಿನ ಭಾವನಾತ್ಮಕ ಸಂಬಂಧ..

ಹೌದು, ಸುಪ್ರೀಂ ಕೋರ್ಟ್ ಆದೇಶದಂತೆ.. ಶಿರೋಲ್ ತಾಲೂಕಿನಲ್ಲಿರುವ ನಂದನಿ ಗ್ರಾಮದ ಜೈನ ಮಠದದ ‘ಮಹಾದೇವಿ ಆನೆ’ಯನ್ನು ರಿಲಾಯನ್ಸ್ ಇಂಡಸ್ಟ್ರೀಸ್ ಮತ್ತು ರಿಲಾಯನ್ಸ್ ಫೌಂಡೇಷನ್ಗೆ ಸೇರಿದ ವಂತಾರ ಅನಿಮಲ್ ರೆಸ್ಕ್ಯೂ ಸೆಂಟರ್ಗೆ ಕರೆದುಕೊಂಡು ಹೋಗಲಾಗಿದೆ. ಇದು ಆ ತಾಲೂಕಿನ ಜನರ ದುಃಖಕ್ಕೆ ಕಾರಣವಾಗಿದೆ. ಜೊತೆಗೆ ಅಂಬಾನಿ ವಿರುದ್ಧ ಆಕ್ರೋಶಕ್ಕೂ ದಾರಿ ಮಾಡಿಕೊಟ್ಟಿದೆ. ಸದ್ಯ ಈ ಪ್ರಕರಣವು ಮಹಾರಾಷ್ಟ್ರದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದೆ. ಮತ್ತೆ ಆನೆಯನ್ನು ವಾಪಸ್ ಕರೆದುಕೊಂಡು ಬರುವ ಕಾರ್ಯಗಳು ಶುರುವಾಗಿವೆ.
ಏನಿದು ಪ್ರಕರಣ?
ಮಹಾದೇವಿ ಆನೆ. ಇದನ್ನ ಶಿರೋಲ್ನ ಜನರು ಪ್ರೀತಿಯಿಂದ ಮಾಧುರಿ ಅಂತಲೂ ಕರೆಯುತ್ತಾರೆ. ತಾಲೂಕಿನ ನಂದನಿ ಮಠದ ಕಳಸದಂತಿದ್ದ ಮಾಧುರಿ ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು. ಜನರ, ಭಕ್ತರ ಪ್ರೀತಿಗೆ ಪಾತ್ರವಾಗಿತ್ತು. ತುಂಬಾ ವರ್ಷಗಳಿಂದ ಮಠದ ಭಕ್ತರ ಜೊತೆ ಭಾವನಾತ್ಮಕ ಬೆಸುಗೆ ಹೊಂದಿದ್ದ ಮಹಾದೇವಿ ಮೇಲೆ ಎನ್ಜಿಓ ಒಂದರ ಕಣ್ಣು ಬಿದ್ದಿದೆ. ಅಲ್ಲಿಗೆ ಬಂದಿದ್ದ ಎನ್ಜಿಓ, ಮಠದ ಅಧಿಕಾರಿಗಳ ಮುಂದೆ ಆನೆ ಚೆನ್ನಾಗಿದೆ ಎಂದು ಹೇಳಿತ್ತಂತೆ. ಆದರೆ, ಅರಣ್ಯ ಇಲಾಖೆ ಹಾಗೂ ಸುಪ್ರೀಂ ಕೋರ್ಟ್ ನೇಮಿಸಿದ್ದ ಹೈಪವರ್ ಕಮಿಟಿ (HPC) ಮುಂದೆ ಆನೆಯ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಮಹಾದೇವಿ ಆನೆಯ ಆರೋಗ್ಯ ಹದಗೆಡುತ್ತಿದೆ. ಜೊತೆಗೆ ಮಾನಸಿಕ ಯಾತನೆ ಅನುಭವಿಸುತ್ತಿದೆ ಎಂದು ದೂರು ನೀಡಿತು.
ಬೆನ್ನಲ್ಲೇ ಪ್ರಕರಣವು ಕೋರ್ಟ್ ಮೆಟ್ಟಿಲೇರಿತು. ವಿಚಾರಣೆ ನಡೆಸಿದ್ದ ಬಾಂಬೇ ಹೈಕೋರ್ಟ್, ಜುಲೈ 16 ರಂದು ಮಹಾದೇವಿ ಆನೆಯನ್ನು ಜಾಮ್ನಗರದಲ್ಲಿರುವ ವಂಟಾರ ಪುನರ್ವಸತಿ ಸೌಲಭ್ಯ ಕೇಂದ್ರಕ್ಕೆ ಕಳುಹಿಸುವಂತೆ ಆದೇಶ ನೀಡಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮಠ ಹಾಗೂ ಆ ಗ್ರಾಮದವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಜುಲೈ 25 ರಂದು, ಸುಪ್ರೀಂ ಕೊರ್ಟ್ ಬಾಂಬೆ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿದೆ. ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಭಾರವಾದ ಮನಸ್ಸಿನಿಂದ ಕಣ್ಣೀರು ಇಡುತ್ತ ಇಡೀ ಗ್ರಾಮವೇ ಬೀಳ್ಕೊಟ್ಟಿದೆ. ಈ ಸಂದರ್ಭದಲ್ಲಿ ಮಾಧುರಿ ಕೂಡ ಕಣ್ಣೀರು ಇಟ್ಟಿದ್ದಾಳೆ..
ಇದೀಗ ಶಿರೋಲ್ ಜನ ಜಿಯೋಗೆ ಬಾಯ್ಕಟ್ ಹೇಳ್ತಿದ್ದಾರೆ. ಮತ್ತೊಂದು ಕಡೆ ಆನೆಯನ್ನು ವಾಪಸ್ ಕೊಲ್ಹಾಪುರ ಜಿಲ್ಲೆಗೆಗೆ ಕರೆದುಕೊಂಡು ಬರುವ ತಯಾರಿಗಳು ನಡೆಯುತ್ತಿವೆ. ನಿನ್ನೆಯ ದಿನ ಮಹಾರಾಷ್ಟ್ರ ಆರೋಗ್ಯ ಸಚಿವ ಪ್ರಕಾಶ್ ಅಬಿಟ್ಕರ್, ಮಹತ್ವದ ಸಭೆ ನಡೆಸಿದ್ದಾರೆ. ಅಲ್ಲದೇ ಜಿಲ್ಲೆಯ ಬಿಜೆಪಿ ಸಂಸದ ಧನಂಜಯ್ ಮಹಾದಿಕ್ ಮತ್ತು ಶಿವಸೇನಾ ಸಂಸದ ಧೈರ್ಯಶೀಲ್ ಮಾನೆ ಅವರು ‘ಮಹಾದೇವಿ’ಯನ್ನು ಮರಳಿ ತರಲು ಸುಪ್ರೀಂ ಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವರದಿಗಳು ಹೇಳಿವೆ.
ಇನ್ನು ನಿನ್ನೆ ಪುಣೆಯಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ಗೆ ಯುವಕನೊಬ್ಬ ಮಹಾದೇವಿ ಆನೆ ಬಗ್ಗೆ ಪ್ರಶ್ನೆ ಎತ್ತಿದ್ದ. ಯುವಕ ಪ್ರಶ್ನೆ ಮಾಡುತ್ತಿದ್ದಂತೆಯೇ ಪವಾರ್ ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ, ಮಹಾದೇವಿ ಆನೆ ಬಗ್ಗೆ ಮತನ್ನಾಡಿದ್ದಾರೆ. ಈ ಪ್ರಕರಣವು ಕೋರ್ಟ್ನಲ್ಲಿ ಇದೆ ನೋಡೋಣ ಎಂದಿದ್ದಾರೆ. ಮತ್ತೊಂದು ಕಡೆ ಮಹಾದೇವಿಯನ್ನು ನಂದನಿಯಲ್ಲಿರುವ ಜೈನ ಮಠಕ್ಕೆ ಹಿಂತಿರುಗಿಸಬೇಕೆಂದು ಒತ್ತಾಯಿಸಿ 1.25 ಲಕ್ಷಕ್ಕೂ ಹೆಚ್ಚು ಜನರು ಫಾರ್ಮ್ಗಳಿಗೆ ಸಹಿ ಹಾಕಿದ್ದಾರೆ.
ಕರ್ನಾಟಕದಿಂದ ಕೊಲ್ಹಾಪುರ ಮಠಕ್ಕೆ
ವರದಿಗಳ ಪ್ರಕಾರ, 1992 ರಲ್ಲಿ ಕರ್ನಾಟಕದಿಂದ ಕೊಲ್ಹಾಪುರ ಮಠಕ್ಕೆ ಮಹಾದೇವಿಯನ್ನ ತರಲಾಗಿತ್ತು. ಆಗ ಆಕೆಗೆ ಸುಮಾರು ಮೂರು ವರ್ಷ ವಯಸ್ಸಾಗಿತ್ತು. 2017ರಲ್ಲಿ ಮುಖ್ಯ ಅರ್ಚಕರನ್ನು ಗೋಡೆಗೆ ತಳ್ಳಿ ಸಾಯಿಸಿದ ಆರೋಪ ಈ ಆನೆ ಮೇಲಿದೆ.




