ಹೊಸದಿಲ್ಲಿ: ಆಪರೇಷನ್ ಸಿಂದೂರದಲ್ಲಿ ಸರಿಸಾಟಿಯಿಲ್ಲದ ಧೈರ್ಯ ತೋರಿದ್ದ ಗಡಿ ಭದ್ರತಾ ಪಡೆ (ಬಿಎಸ್ಎಫ್)ಯ 16 ಯೋಧರಿಗೆ ಕೇಂದ್ರ ಸರಕಾರ ಶೌರ್ಯ ಪ್ರಶಸ್ತಿ ಘೋಷಿಸಿದೆ.

ಈ ಬಗ್ಗೆ ಬಿಎಸ್ಎಫ್ ಮಾಹಿತಿ ನೀಡಿದ್ದು, “ಆಪರೇಷನ್ ಸಿಂದೂ-ರದ ವೇಳೆ ದೃಢವಾಗಿ ಕಾರ್ಯನಿರ್ವಹಿಸಿ, ಸರಿಸಾಟಿಯಿಲ್ಲದ ಧೈರ್ಯ ತೋರಿ ಗಮನ ಸೆಳೆದ ಬಿಎಸ್ಎಘ್ನ 16 ಯೋಧರಿಗೆ ಸ್ವಾತಂತ್ರ್ಯ ದಿನದಂದು ಶೌರ್ಯ ಪ್ರಶಸ್ತಿ ನೀಡಲಾಗುತ್ತಿದೆ. ಈ ಪದಕಗಳು ದೇಶದ ಮುಂಚೂಣಿ ಪಡೆಯಾದ ಬಿಎಸ್ಎಫ್ ಮೇಲೆ ದೇಶ ಹೊಂದಿರುವ ಅಚಲ ನಂಬಿಕೆಗೆ ಸಾಕ್ಷಿ’ ಎಂದಿದೆ. 16 ಮಂದಿ ಪೈಕಿ ಒಬ್ಬರು ಡೆಪ್ಯುಟಿ ಕಮಾಂಡೆಂಟ್, ಇಬ್ಬರು ಸಹಾಯಕ ಕಮಾಂಡೆಂಟ್ ಹಾಗೂ ಒಬ್ಬ ಇನ್ಸ್ಪೆಕ್ಟರ್ ಇದ್ದಾರೆ. ಈ ವರ್ಷ ಒಟ್ಟು 233 ಮಂದಿಗೆ ಶೌರ್ಯ ಪ್ರಶಸ್ತಿ ನೀಡಲಾಗುತ್ತಿದ್ದು, ಈ ಪೈಕಿ 152 ಮಂದಿ ಕಾಶ್ಮೀರದಲ್ಲಿನ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಭಾಗಿಯಾದವರು.
1090 ಮಂದಿಗೆ ಪೊಲೀಸ್ ಪದಕದ ಗೌರವ:
ಕೇಂದ್ರ ಹಾಗೂ ರಾಜ್ಯ ಮಟ್ಟದ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 1,090 ಪೊಲೀಸ್ ಸಿಬಂದಿಗೆ ಸೇವಾ ಪದಕ ಘೋಷಿಸಿದೆ. 233 ಸಿಬಂದಿಗೆ ಶೌರ್ಯ ಪದಕ, 99 ಮಂದಿಗೆ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ, 758 ಮಂದಿಗೆ ಶ್ಲಾಘನೀಯ ಸೇವಾ ಪದಕ ಘೋಷಿಸಲಾಗಿದ್ದು, ಇದರಲ್ಲಿ ಅಗ್ನಿಶಾಮಕ, ಗೃಹ ರಕ್ಷಣ ಪಡೆ ಸಿಬಂದಿಯೂ ಇದ್ದಾರೆ.




