ದಕ್ಷಿಣ ಕನ್ನಡ: ಪ್ರತೀ ವರ್ಷ ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ದುರ್ಗಾಪರಮೇಶ್ವರಿ ದೇವಾಲಯ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಬಹಳಷ್ಟು ಭಕ್ತರು ಆಗಮಿಸುತ್ತಾರೆ. ಇದೀಗ ಈ ದೇವಸ್ಥಾನಗಳಲ್ಲಿ ದೇವರ ಸೇವೆಗೆ ದುಪ್ಪಟ್ಟು ಹಣ ತೆರಬೇಕಾಗಿದೆ. ಸರ್ಕಾರ ಧಾರ್ಮಿಕ ದತ್ತಿ ಇಲಾಖೆಯಲ್ಲೂ ದೇವಾಲಯಗಳ ಸೇವಾ ದರ ಹೆಚ್ಚಳ ಮಾಡಿ, ಮತ್ತಷ್ಟು ಹೊರೆ ಹೆಚ್ಚಿಸಿದೆ.

ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ದೇವಸ್ಥಾನಗಳ ಸೇವಾ ದರದಲ್ಲಿ ಹೆಚ್ಚಳವಾಗಿದ್ದು, ಇನ್ನು ಮೇಲೆ ದೇವರ ಸೇವಾ ದರ ಭಾರೀ ಏರಿಕೆಯಾಗಲಿದೆ. 100 ರಿಂದ 150 ರೂಪಾಯಿ ಹೆಚ್ಚಳ ಮಾಡಿದ ಧಾರ್ಮಿಕ ದತ್ತಿ ಇಲಾಖೆ ಭಕ್ತರಿಗೆ ಮತ್ತಷ್ಟು ದರ ಏರಿಕೆ ಬಿಸಿ ಮುಟ್ಟಿಸಿದೆ.
ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ ಎ ಗ್ರೇಡ್ ಕ್ಷೇತ್ರಗಳಲ್ಲಿ ದೇವರ ಸೇವೆಗೆ ಡಬ್ಬಲ್ ಚಾರ್ಜ್ ನೀಡಲಾಗಿದೆ. ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಪುಷ್ಪಾರ್ಚನೆ ಸೇವೆಗೆ 220 ರೂಪಾಯಿ ಹೆಚ್ಚಳವಾಗಿದೆ. ಈ ಹಿಂದೆ ಇದ್ದ 120 ರೂಪಾಯಿಯಿಂದ 220 ರೂಪಾಯಿಗೆ ಏರಿಕೆ ಮಾಡಿ ಧಾರ್ಮಿಕ ದತ್ತಿ ಇಲಾಖೆ ಘೋಷಣೆ ಮಾಡಿದೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷ ಪೂಜೆ ಸೇವೆಗೆ ಈ ಹಿಂದೆ ಇದ್ದ ದರ 400 ರೂಪಾಯಿ. ಆದರೆ ಇದೀಗ ಪರಿಷ್ಕೃತ ದರ 500 ರೂಪಾಯಿಯಾಗಿದೆ. ಇನ್ನು ನಾಗಪ್ರತಿಷ್ಠೆಗೆ ಈ ಹಿಂದೆ ಇದ್ದ ದರ 400 ರೂಪಾಯಿ. ಆದರೆ ಧಾರ್ಮಿಕ ದತ್ತಿ ಇಲಾಖೆ ಪರಿಷ್ಕೃತ ದರ 500 ರೂಪಾಯಿಗೆ ಹೆಚ್ಚಿಸಿದೆ. ಹೀಗೆ ಉಳಿದ ಸೇವೆಗಳಲ್ಲೂ ಭಾರೀ ಹೆಚ್ಚಳ ಮಾಡಿದ್ದು, ಭಕ್ತರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.




