ಆನೇಕಲ್, ಅಕ್ಟೋಬರ್ 26: ಚಾಲಕನ ನಿಯಂತ್ರಣ ತಪ್ಪಿ ಕಂಟೈನರ್ ಪಲ್ಟಿ (Accident) ಹೊಡೆದ ಪರಿಣಾಮ ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವಂತಹ (death) ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಸಿದ್ದಯ್ಯನದೊಡ್ಡಿ ಬಳಿ ನಡೆದಿದೆ. ಆಂಧ್ರ ಮೂಲದ ಶ್ರೀಮಾನ್(25) ಮತ್ತು ಜಾರ್ಖಂಡ್ ಮೂಲದ ಶ್ರೀನಿವಾಸ್(28) ಮೃತ ದುರ್ದೈವಿಗಳು. ಸದ್ಯ ಕ್ರೇನ್ನಿಂದ ಮೃತದೇಹಗಳನ್ನ ಪೊಲೀಸರು ಹೊರ ತೆಗೆದಿದ್ದಾರೆ. ಘಟನಾ ಸ್ಥಳಕ್ಕೆ ಜಿಗಣಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ನಡೆದದ್ದೇನು?
ಇಳಿಜಾರಿನ ತಿರುವಿನಲ್ಲಿ ಅತಿವೇಗವಾಗಿ ಬಂದ ಕಂಟೈನರ್, ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ. ಬೆಳಿಗ್ಗೆ 11ಗಂಟೆಯ ಸುಮಾರಿಗೆ ಅವಘಡ ನಡೆದಿದೆ. ಯಲಹಂಕದಲ್ಲಿರುವ Jd ಎಂಟರ್ಪ್ರೈಸಸ್ಗೆ ಸೇರಿದ ಕಂಟೈನರ್ನಲ್ಲಿ ರಸ್ತೆಯ ಕೇಬಲ್ ಡ್ರೀಲಿಂಗ್ ಮಿಷನ್ ತುಂಬಿತ್ತು.
ಕಂದಕ್ಕೆ ಉರುಳಿ ವಾಹನದ ಕೆಳಗೆ ಇಬ್ಬರು ಕಾರ್ಮಿಕರು ಸಿಲುಕಿದ್ದರು. ಉಳಿದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ ಜಿಗಣಿಯ ವಿಜಯಶ್ರೀ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ.
ಕ್ರೇನ್ ನೆರವಿನಿಂದ ಮೃತದೇಹಗಳು ಹೊರ ತೆಗೆದ ಪೊಲೀಸ್
ಕ್ಯಾಂಟರ್ ಕೆಳಗೆ ಸಿಲುಕಿದ್ದ ಮೃತದೇಹಗಳನ್ನು ಸದ್ಯ ಎರಡು ಕ್ರೇನ್ ನೆರವಿನಿಂದ ಹೊರ ತೆಗೆಯಲಾಗಿದೆ. ಕ್ಯಾಂಟರ್ ಚಾಲಕನಾಗಿದ್ದ ಮೃತ ಶ್ರೀನಿವಾಸ್, ಕೇಬಲ್ ಡ್ರಿಲ್ಲಿಂಗ್ ಮಿಷನ್ ಆಪರೇಟರ್ ಆಗಿದ್ದ ಮೃತ ಶ್ರೀಮಾನ್.
ಇನ್ನು ಸ್ಥಳಕ್ಕೆ ಡಿವೈಎಸ್ಪಿ ಮೋಹನ್ ಕುಮಾರ್, ಜಿಗಣಿ ಇನ್ಸ್ಪೆಕ್ಟರ್ ಮಂಜುನಾಥ್ ಮತ್ತು ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ವೆಂಕಟೇಶ್ ಪ್ರಸನ್ನ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಚಾರ್ಮಾಡಿ ಘಾಟಿಯಲ್ಲಿ ಲಾರಿ ಪಲ್ಟಿ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ 10 ನೇ ತಿರುವಿನಲ್ಲಿ ರಸ್ತೆಗೆ ಅಡ್ಡಲಾಗಿ ಲಾರಿವೊಂದು ಪಲ್ಟಿ ಆಗಿರುವಂತಹ ಘಟನೆ ನಡೆದಿದೆ. ಟ್ರಕ್ ರಸ್ತೆಗೆ ಅಡ್ಡಲಾಗಿ ಬಿದ್ದ ಹಿನ್ನೆಲೆ ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು.
ಚಾರ್ಮಾಡಿ ಘಾಟಿಯಲ್ಲಿ ಬೃಹತ್ ಗಾತ್ರದ ವಾಹನಗಳಿಗೆ ಸಂಚಾರ ನಿರ್ಬಂಧ ಇದ್ದರು ಕೊಟ್ಟಿಗೆಹಾರ ಚೆಕ್ ಪೋಸ್ಟ್ನಲ್ಲಿ ಸಿಬ್ಬಂದಿ ಲಾರಿ ತಡೆದಿಲ್ಲ. ಚಿಕ್ಕಮಗಳೂರು ಮಾರ್ಗವಾಗಿ ಚಾರ್ಮಾಡಿ ಘಾಟಿ ಮೂಲಕ ಮಂಗಳೂರಿಗೆ ಲಾರಿ ತೆರಳುತ್ತಿತ್ತು.





