ಬೆಳಗಾವಿ, ನವೆಂಬರ್ 02: ಕುಂದಾನಗರಿ ಬೆಳಗಾವಿಯಲ್ಲಿ (Belagavi) ಅದ್ದೂರಿಯಾಗಿ ನಡೆದ ಕರ್ನಾಟಕ ರಾಜ್ಯೋತ್ಸವ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಐವರಿಗೆ ಚಾಕು ಇರಿಯಲಾಗಿದೆ. ಇದೇ ಮೆರವಣಿಗೆ ವೇಳೆ 300ಕ್ಕೂ ಹೆಚ್ಚು ಮೊಬೈಲ್ ಕಳವು (Mobile Theft) ಮಾಡಿ ಕಳ್ಳರು ಕೈಚಳಕ ತೋರಿಸಿದ್ದಾರೆ. ಸದ್ಯ ಮುನ್ನೂರಕ್ಕೂ ಹೆಚ್ಚು ಜನರಿಂದ ಖಡೇಬಜಾರ್, ಮಾರ್ಕೆಟ್ ಮತ್ತು ಕ್ಯಾಂಪ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಯುವಕ, ಯುವತಿಯರೇ ಟಾರ್ಗೆಟ್
ಶನಿವಾರ ಚೆನ್ನಮ್ಮ ಸರ್ಕಲ್ನಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ ನಡೆಯಿತು. ಆದರೆ ಇದೇ ಸಂಭ್ರಮ, ಸಡಗರದಲ್ಲಿ ಕಹಿ ಘಟನೆಗಳೂ ಕಾರಣವಾಗಿದೆ. ಯುವಕ ಮತ್ತು ಯುವತಿಯರನ್ನ ಟಾರ್ಗೆಟ್ ಮಾಡಿ ಕಳ್ಳರ ಗ್ಯಾಂಗ್ ಮೊಬೈಲ್ ಕಳವು ಮಾಡಿದ್ದಾರೆ. ಐಫೋನ್, ಸ್ಯಾಮ್ಸಂಗ್, ಮೋಟೊ, ವಿವೋ ಸೇರಿದಂತೆ ಅನೇಕ ಕಂಪನಿಯ ಮೊಬೈಲ್ ಕಳ್ಳತನವಾಗಿದೆ.
ನಿನ್ನೆ ಸಂಜೆ 7 ಗಂಟೆಯಿಂದ ರಾತ್ರಿ 10 ಗಂಟೆಯಲ್ಲಿ ಬರೋಬ್ಬರಿ 300ಕ್ಕೂ ಹೆಚ್ಚು ಮೊಬೈಲ್ ಕಳತನವಾಗಿವೆ. ಮೊಬೈಲ್ ಕಳವುವಾಗುತ್ತಿದ್ದಂತೆ ಆ್ಯಪ್ ಮೂಲಕ ಮೊಬೈಲ್ ಕಳೆದುಕೊಂಡವರು ದೂರು ಸಲ್ಲಿಸಿದ್ದು, ದೂರಿನ ಪ್ರತಿ ಜತೆ ಠಾಣೆಗೆ ಆಗಮಿಸಿ ಮೊಬೈಲ್ ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ.
ಸಂಭ್ರಮದಲ್ಲಿದ್ದವರ ರಕ್ತ ಹರಿಸಿ ಕಿಡಿಗೇಡಿಗಳು ಪರಾರಿ
ಬೆಳಗಾವಿಯಲ್ಲಿ ಒಂದೆಡೆ ಎಂಇಎಸ್ ಪುಂಡರು ಕರಾಳ ದಿನಾಚರಣೆ ಮಾಡಿ ನಾಡದ್ರೋಹಿ ಕೆಲಸ ಮಾಡಿದ್ದಾರೆ. ಇದರ ನಡುವೆ ಶನಿವಾರ ರಾತ್ರಿ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ತೊಡಗಿದ್ದವರ ಮೇಲೆ ಕೆಲ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ. ಸದಾಶಿವನಗರ ಲಕ್ಷ್ಮೀ ಕಾಂಪ್ಲೆಕ್ಸ್ ಬಳಿ ಭುವನೇಶ್ವರಿ ಮೂರ್ತಿ ಮೆರವಣಿಗೆ ಮಾಡುತ್ತಾ, ಯುವಕರ ಗುಂಪು ಡ್ಯಾನ್ಸ್ ಮಾಡುತ್ತಿದ್ದರು. ಈ ವೇಳೆ ಚಾಕು ಹಿಡಿದು ಏಕಾಏಕಿ ಸ್ಥಳಕ್ಕೆ ನುಗ್ಗಿದ 10 ರಿಂದ 11ಮಂದಿ ದುಷ್ಕರ್ಮಿಗಳು ಸಿಕ್ಕಸಿಕ್ಕವರಿಗೆ ಚಾಕು ಇರಿದು ಪರಾರಿಯಾಗಿದ್ದಾರೆ.
ಒಟ್ಟು ಐವರಿಗೆ ಬೆನ್ನು, ಹೊಟ್ಟೆ ಹೀಗೆ ಬೇರೆ ಬೇರೆ ಭಾಗಗಳಲ್ಲಿ ಚಾಕು ಇರಿಯಲಾಗಿದ್ದು, ಸದ್ಯ ಎಲ್ಲರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಘವೇಂದ್ರ, ಸಚಿನ್, ಲೋಕೇಶ್, ಮಹೇಶ್, ವಿನಾಯಕ್ ಗಾಯಾಳುಗಳಾಗಿದ್ದು, ಎಲ್ಲರೂ ನೆಹರು ನಗರದ ನಿವಾಸಿಗಳು ಅಂತಾ ತಿಳಿದುಬಂದಿದೆ.





