ಕಾರ್ಕಳ: ಗ್ರಾಮದ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಮತ್ತು ಸಾರ್ವಜನಿಕರಲ್ಲಿ ಜವಾಬ್ದಾರಿಯನ್ನು ಹೆಚ್ಚಿಸುವ ಉದ್ದೇಶದಿಂದ ಕಾರ್ಕಳ ತಾಲೂಕಿನ ಪಳ್ಳಿ ಮತ್ತು ಸಾಣೂರು ಗ್ರಾಮ ಪಂಚಾಯತ್ ಅತ್ಯಂತ ಕಟ್ಟುನಿಟ್ಟಿನ ಹಾಗೂ ವಿನೂತನ ಕ್ರಮಕ್ಕೆ ಮುಂದಾಗಿವೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ಬಗ್ಗೆ ಮಾಹಿತಿ ನೀಡುವವರಿಗೆ ಪಂಚಾಯತ್ ವತಿಯಿಂದ 2,000 ರೂ. ನಗದು ಬಹುಮಾನ ಘೋಷಿಸಲಾಗಿದೆ.

ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಚ್ಛತಾ ಸಿಬಂದಿ ಹಗಲಿರುಳು ಶ್ರಮಿಸಿ ಗ್ರಾಮವನ್ನು ಸುಂದರವಾಗಿ ಇಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಕೆಲವು ಬೇಜವಾಬ್ದಾರಿಯ ವ್ಯಕ್ತಿಗಳು ರಸ್ತೆ ಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ಸೇರಿದಂತೆ ಘನ ಮತ್ತು ದ್ರವ ತ್ಯಾಜ್ಯಗಳನ್ನು ಎಸೆಯು ತ್ತಿರುವುದು ಪಂಚಾಯತ್ಗೆ ತಲೆನೋವಾಗಿ ಪರಿಣಮಿಸಿದೆ.
ಈ ಸಮಸ್ಯೆಗೆ ಇತಿಶ್ರೀ ಹಾಡಲು, ತ್ಯಾಜ್ಯ ಎಸೆಯುವವರ ಫೋಟೋ, ವಿಡಿಯೋ, ಕಣ್ಣಾರೆ ಕಂಡು, ಇತರೆ ಸಾಕ್ಷ್ಯ ಸಮೇತ ಮಾಹಿತಿ ನೀಡುವ ಸಾರ್ವಜನಿಕರಿಗೆ ಬಹುಮಾನ ನೀಡುವುದಾಗಿ ಸಾಣೂರು ಗ್ರಾ. ಪಂ. ಪಿಡಿಒ ವಿಶ್ವನಾಥ್, ಪಳ್ಳಿ ಪಿಡಿಒ ಪ್ರಮಿಳಾ ಅವರು ಮಾಹಿತಿ ನೀಡಿದ್ದಾರೆ.
ಬಹುಮಾನ ಮಾತ್ರವಲ್ಲದೆ, ಕಸ ಎಸೆದವರಿಗೆ ಭಾರಿ ದಂಡವನ್ನೂ ವಿಧಿಸಲು ನಿರ್ಧರಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆದು ಸಿಕ್ಕಿಬಿದ್ದವರಿಗೆ ಜಿ. ಪಂ. ಸಿಇಒ ಅವರ ಆದೇಶದ ಮೇರೆಗೆ ತತ್ಕ್ಷಣವೇ 5,000 ರೂ. ದಂಡ ವಿಧಿಸಲಾಗುವುದು. ಈಗಾಗಲೇ ಈ ಬಗ್ಗೆ ವ್ಯಾಪಕ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ತಮ್ಮೂರಿನ ನೈರ್ಮಲ್ಯ ಕಾಪಾಡಲು ಕೈಜೋಡಿಸಬೇಕೆಂದು ಗ್ರಾ. ಪಂ. ವಿನಂತಿಸಿದೆ.
ಮಿಯಾರಿನಲ್ಲಿ ತ್ಯಾಜ್ಯ ಎಸೆದ ವ್ಯಕ್ತಿಗೆ 5,000 ದಂಡ
ಮಿಯಾರು ಗ್ರಾ. ಪಂ. ವ್ಯಾಪ್ತಿಯಲ್ಲಿ ಈಗಾಗಲೇ ಇಂತಹ ಕಟ್ಟುನಿಟ್ಟಿನ ಕ್ರಮ ಜಾರಿಯಲ್ಲಿದೆ. ಸಾರ್ವಜನಿಕ ಸ್ಥಳದಲ್ಲಿ ಘನ ಮತ್ತು ದ್ರವ ತ್ಯಾಜ್ಯವನ್ನು ಎಸೆದ ವ್ಯಕ್ತಿಯನ್ನು ಪತ್ತೆ ಹಚ್ಚಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಆತನಿಗೆ 5,000 ರೂ. ದಂಡ ವಿಧಿಸಿದ್ದಾರೆ. ಗ್ರಾಮಗಳ ಸ್ವಚ್ಛತೆಯೇ ನಮ-¾ ಮೊದಲ ಆದ್ಯತೆಯಾಗಿದೆ. ಸ್ವಚ್ಛ ಪರಿಸರ, ತ್ಯಾಜ್ಯ ವಿಲೇವಾರಿ ನಿಯಮಗಳನ್ನು ಉಲ್ಲಂ ಸುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ತಾ. ಪಂ. ಇಒ ಪ್ರಶಾಂತ್ ರಾವ್ ತಿಳಿಸಿದ್ದಾರೆ.




