ಸಂಕಷ್ಟದಲ್ಲಿ ರಿಷಬ್ ಶೆಟ್ಟಿಯ ತೆಲುಗು ಸಿನಿಮಾ, ನಿರ್ದೇಶಕನ ವಿರುದ್ಧ ದೂರು

Share with

ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಭಾರಿ ದೊಡ್ಡ ಯಶಸ್ಸು ಗಳಿಸಿದೆ. ಸಿನಿಮಾ 1000 ಕೋಟಿಯ ಗಡಿಯಲ್ಲಿದೆ. ಚಿತ್ರಮಂದಿರಗಳಲ್ಲಿ ಒಳ್ಳೆಯ ಪ್ರದರ್ಶನ ಕಾಣುತ್ತಿರುವಾಗಲೇ ಸಿನಿಮಾ ಒಟಿಟಿಗೆ ಲಗ್ಗೆ ಇಟ್ಟಿದ್ದು, ಒಟಿಟಿಯಲ್ಲಿಯೂ ಸಹ ಒಳ್ಳೆಯ ವೀವ್ಸ್ ಪಡೆಯುತ್ತಿದೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಚಿತ್ರೀಕರಣದ ಹಂತದಲ್ಲಿಯೇ ರಿಷಬ್ ಶೆಟ್ಟಿ ತೆಲುಗು ಸಿನಿಮಾನಲ್ಲಿ ನಟಿಸುತ್ತಿರುವುದಾಗಿ ಘೋಷಿಸಿದ್ದು, ಸಿನಿಮಾದ ಪೋಸ್ಟರ್ ಸಹ ಬಿಡುಗಡೆ ಆಗಿತ್ತು. ಆದರೆ ಇದೀಗ ಆ ಸಿನಿಮಾ ಸಂಕಷ್ಟಕ್ಕೆ ಸಿಲುಕಿದೆ.

ರಿಷಬ್ ಶೆಟ್ಟಿ ತೆಲುಗು ಪ್ಯಾನ್ ಇಂಡಿಯಾ ಸಿನಿಮಾ ‘ಜೈ ಹನುಮಾನ್’ನಲ್ಲಿ ನಾಯಕನಾಗಿ ನಟಿಸಲಿದ್ದಾರೆ. ಬ್ಲಾಕ್ ಬಸ್ಟರ್ ಸಿನಿಮಾ ‘ಹನು-ಮ್ಯಾನ್’ ನಿರ್ದೇಶಿಸಿದ್ದ ಪ್ರಶಾಂತ್ ವರ್ಮಾ ‘ಜೈ ಹನುಮಾನ್’ ಸಿನಿಮಾ ನಿರ್ದೇಶನ ಮಾಡಿದ್ದರು. ಅವರೇ ‘ಜೈ ಹನುಮಾನ್’ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದರು, ‘ಪುಷ್ಪ 2’ ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳ ನಿರ್ಮಿಸಿರುವ ಮೈತ್ರಿ ಮೂವಿ ಮೇಕರ್ಸ್ ‘ಜೈ ಹನುಮಾನ್’ ಸಿನಿಮಾ ನಿರ್ಮಾಣ ಮಾಡಲಿತ್ತು, ಆದರೆ ಇದೀಗ ಸಿನಿಮಾದ ನಿರ್ದೇಶಕ ಪ್ರಶಾಂತ್ ವರ್ಮಾ ವಿರುದ್ಧ ದೂರು ದಾಖಲಾಗಿದೆ.

ಪ್ರಶಾಂತ್ ವರ್ಮಾ ವಿರುದ್ಧ ನಿರ್ಮಾಪಕರ ಸಂಘ, ಫಿಲಂ ಚೇಂಬರ್ ನಲ್ಲಿ ದೂರು ದಾಖಲಾಗಿದೆ. ‘ಹನು-ಮ್ಯಾನ್’ ಸಿನಿಮಾ ನಿರ್ಮಾಣ ಮಾಡಿದ್ದ ನಿರ್ಮಾಪಕರೇ ಇದೀಗ ಪ್ರಶಾಂತ್ ವರ್ಮಾ ವಿರುದ್ಧ ವಂಚನೆ, ಮೋಸದ ದೂರು ದಾಖಲು ಮಾಡಿದ್ದಾರೆ. ನಿರ್ಮಾಪಕರು ನೀಡಿರುವ ದೂರಿನ ಅನ್ವಯ, ‘ಹನು-ಮ್ಯಾನ್’ ಸಿನಿಮಾದ ಬಳಿಕ ಪ್ರಶಾಂತ್ ವರ್ಮಾಗೆ 10 ಕೋಟಿ ರೂಪಾಯಿ ಹಣವನ್ನು ನಿರ್ಮಾಪಕ ನಿರಂಜನ್ ರೆಡ್ಡಿ ನೀಡಿದ್ದರಂತೆ. ಪ್ರಶಾಂತ್ ವರ್ಮಾ, ಐದು ಸಿನಿಮಾಗಳನ್ನು ನಿರ್ದೇಶನ ಮಾಡಿ ಕೊಡುವುದಾಗಿ ಹೇಳಿ ಇಷ್ಟು ದೊಡ್ಡ ಮೊತ್ತದ ಅಡ್ವಾನ್ಸ್ ಹಣವನ್ನು ಪಡೆದುಕೊಂಡಿದ್ದರಂತೆ. ಆದರೆ ವರ್ಮಾ, ತಮಗೆ ಸಿನಿಮಾ ನಿರ್ದೇಶನ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ ನಿರ್ಮಾಪಕ.

‘ಅಧೀರ’, ‘ಮಹಾಕಾಳಿ’, ‘ಬ್ರಹ್ಮರಾಕ್ಷಸ’, ‘ಆಕ್ಟೊಪಸ್’ ಮತ್ತು ‘ಜೈ ಹನುಮಾನ್’ ಸಿನಿಮಾಗಳನ್ನು ನಿರ್ದೇಶನ ಮಾಡಿಕೊಡುವುದಾಗಿ ಪ್ರಶಾಂತ್ ವರ್ಮಾ ಭರವಸೆ ನೀಡಿದ್ದರಂತೆ. ಅದಕ್ಕಾಗಿಯೇ ನಿರ್ಮಾಪಕ ನಂಜುಂಡ ರೆಡ್ಡಿ 10 ಕೋಟಿ ರೂಪಾಯಿ ಹಣವನ್ನು ನೀಡಿದ್ದಾರಂತೆ. ಮಾತ್ರವಲ್ಲದೆ ಪ್ರಶಾಂತ್ ವರ್ಮಾ ಹೇಳಿದ್ದಕ್ಕೆ ಕೆಲ ಪ್ರಾಜೆಕ್ಟ್ಗಳ ಮೇಲೆ 20 ಕೋಟಿ ಹಣ ಖರ್ಚು ಸಹ ಮಾಡಿದ್ದಾರಂತೆ. ಆದರೆ ಈಗ ಪ್ರಶಾಂತ್ ವರ್ಮಾ ತಮಗೆ ಸಿನಿಮಾ ಮಾಡಿಕೊಡುತ್ತಿಲ್ಲ ಎಂದು ನಿರಂಜನ್ ರೆಡ್ಡಿ ಆರೋಪಿಸಿ ದೂರು ನೀಡಿದ್ದಾರೆ.

‘ಜೈ ಹನುಮಾನ್’ ಸಿನಿಮಾವನ್ನು ನಿರಂಜನ್ ರೆಡ್ಡಿಗೆ ನಿರ್ದೇಶನ ಮಾಡಿಕೊಡುವುದಾಗಿ ಪ್ರಶಾಂತ್ ವರ್ಮಾ ಹೇಳಿದ್ದರಂತೆ. ಆದರೆ ಈಗ ಅವರು ಅದೇ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನಿರ್ದೇಶಿಸಲು ಮುಂದಾಗಿದ್ದಾರೆ. ಇದರ ಬಗ್ಗೆಯೂ ಜಿರಂಜನ್ ರೆಡ್ಡಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣ ಈಗ ನಿರ್ಮಾಪಕರ ಸಂಘ, ಫಿಲಂ ಚೇಂಬರ್ನಲ್ಲಿದ್ದು ನಿರ್ದೇಶಕ ಪ್ರಶಾಂತ್ ವರ್ಮಾ ಅನ್ನು ಕರೆಸಿ ಮಾತುಕತೆ ಆಡಲಿದ್ದಾರೆ.

ಪ್ರಶಾಂತ್ ವರ್ಮಾ ವಿರುದ್ಧ ನಿರಂಜನ್ ರೆಡ್ಡಿ ಮಾತ್ರವೇ ಅಲ್ಲದೆ ಇನ್ನೂ ಕೆಲ ನಿರ್ಮಾಪಕರು ದೂರು ನೀಡಿದ್ದಾರೆ ಎನ್ನಲಾಗುತ್ತಿದೆ. ಪ್ರಶಾಂತ್ ವರ್ಮಾ, ಮುಂಗಡ ಹಣ ತೆಗೆದುಕೊಂಡು ಸಿನಿಮಾ ಮಾಡಿಕೊಡುತ್ತಿಲ್ಲ ಎಂದು ಕೆಲವರು ದೂರು ನೀಡಿದ್ದಾರಂತೆ. ಅಂದಹಾಗೆ ಕನ್ನಡದ ನಿರ್ಮಾಣ ಸಂಸ್ಥೆ ಹೊಂಬಾಳೆ ಸಹ ಮುಂಗಡ ಹಣವನ್ನು ನೀಡಿದೆ ಎನ್ನಲಾಗುತ್ತಿದೆ. ಆದರೆ ಈ ಆರೋಪಗಳನ್ನು ಪ್ರಶಾಂತ್ ವರ್ಮಾ ನಿರಾಕರಿಸಿದ್ದಾರೆ.


Share with

Leave a Reply

Your email address will not be published. Required fields are marked *