ಸೆರೆ ಹಿಡಿಯುವ ವೇಳೆ ಚಿರತೆಗೆ ಗುಂಡು ಹೊಡೆದ ಅಧಿಕಾರಿಗಳು..! ಕೊಲೆ ಎಂದು ಇಲಾಖೆ ವಿರುದ್ಧ ಆಕ್ರೋಶ

Share with

ಚಿಕ್ಕಮಗಳೂರು: ಸೆರೆ ಹಿಡಿಯುವ ವೇಳೆ ಆತ್ಮರಕ್ಷಣೆಗೆಂದು ಅಧಿಕಾರಿಗಳು ಹಾರಿಸಿದ ಗುಂಡಿನಿಂದ ಚಿರತೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಭೈರಾಪುರ ಗ್ರಾಮದಲ್ಲಿ ನಡೆದಿದ್ದು, ಇದು ಅಧಿಕಾರಿಗಳೇ ಮಾಡಿದ ಕೊಲೆ ಎಂದು ಪ್ರಾಣಿಪ್ರಿಯರು ಹಾಗೂ ಪರಿಸರವಾದಿಗಳು ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ನಿನ್ನೆ (ನ.29) ತರೀಕೆರೆ ತಾಲೂಕಿನ ಬೈರಾಪುರ ಗ್ರಾಮದಲ್ಲಿ ಮನೆ ಬಳಿಯಿದ್ದ 11 ವರ್ಷದ ಯುವಕನ ಮೇಲೆ ಚಿರತೆ ದಾಳಿ ಮಾಡಿತ್ತು. ತೀವ್ರ ಗಾಯಗೊಂಡಿದ್ದ ಯುವಕನನ್ನು ತರೀಕೆರೆ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 11 ವರ್ಷದ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದ.

ಆದರೆ, ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಮುಂದಾಗಿತ್ತು. ಇಂದು (ನ.30) ಬೈರಾಪುರ ಗ್ರಾಮದಲ್ಲಿ ಚಿರತೆ ಇರುವುದನ್ನು ಖಚಿತಪಡಿಸಿಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಮುಂದಾಗಿದ್ದರು.

ಈ ವೇಳೆ ಗಿಡ-ಗಂಟೆಗಳ ಮಧ್ಯೆ ಚಿರತೆ ಹಾರಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಆತ್ಮರಕ್ಷಣೆಗಾಗಿ ಚಿರತೆ ಮೇಲೆ ಗುಂಡು ಹಾರಿಸಿದ್ದಾರೆ. ಆದರೆ, ಚಿರತೆ ತಪ್ಪಿಸಿಕೊಂಡಿತ್ತು.

ಅಧಿಕಾರಿಗಳು ಚಿರತೆಗಾಗಿ ಹುಡುಕಾಡಿದ ಬಳಿಕ ಚಿರತೆಯ ಮೃತದೇಹ ಪತ್ತೆಯಾಗಿತ್ತು. ಚಿರತೆಯ ದೇಹದ ಮೇಲೆ ಗುಂಡಿನ ಗುರುತು ಇದ್ದು, ಇದು ಅಧಿಕಾರಿಗಳೇ ಮಾಡಿದ ಕೊಲೆ ಎಂದು ಸ್ಥಳೀಯರು, ಪ್ರಾಣಿ ಪ್ರಿಯರು ಹಾಗೂ ಪರಿಸರವಾದಿಗಳು ಆರೋಪಿಸಿದ್ದಾರೆ.

ಕಳೆದ ಒಂದು ವಾರದ ಹಿಂದಷ್ಟೇ ತರೀಕೆರೆ ತಾಲೂಕಿನ ಮುಂಡ್ರೆ ಗ್ರಾಮದ ಬಳಿ ಕೊಟ್ಟಿಗೆಯಲ್ಲಿದ್ದ 5 ವರ್ಷದ ಬಾಲಕಿಯನ್ನು ಚಿರತೆ ಹೊತ್ತೊಯ್ದಿತ್ತು. ನಿನ್ನೆ ಮತ್ತೊಬ್ಬ ಯುವಕನ ಮೇಲೆ ದಾಳಿ ಮಾಡಿದ್ದು ಚಿಕ್ಕಮಗಳೂರು ಜಿಲ್ಲೆಯ ಬಯಲುಸೀಮೆ ಭಾಗದ ರೈತರು ಚಿರತೆ ಹಾವಳಿಯಿಂದ ಹೈರಾಣಾಗಿದ್ದಾರೆ.


Share with

Leave a Reply

Your email address will not be published. Required fields are marked *