ಬೆಂಗಳೂರು, ಡಿಸೆಂಬರ್ 02: ನಗರದ ಫ್ರೀಡಂ ಪಾರ್ಕ್ನಲ್ಲಿ ಕರ್ನಾಟಕದ ಲಕ್ಷಾಂತರ ಅಂಗನವಾಡಿ ಸಹಾಯಕಿಯರು, ಕಾರ್ಯಕರ್ತೆಯರು, ಮಧ್ಯಾಹ್ನದ ಬಿಸಿಯೂಟ ಕಾರ್ಯಕರ್ತೆಯರು ಸೇರಿದಂತೆ ಆಶಾ ಕಾರ್ಯಕರ್ತೆಯರು (Asha Workers Strike) ಸೋಮವಾರದಿಂದ (ಡಿಸೆಂಬರ್ 1) ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು, ಸರ್ಕಾರವು ಭವಿಷ್ಯ ನಿಧಿ ಮತ್ತು ಇಎಸ್ಐನಂತಹ ಎಲ್ಲಾ ಪ್ರಯೋಜನಗಳನ್ನು ತಮಗೆ ನೀಡಬೇಕು ಎನ್ನುವ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ಸ್ಟ್ರೈಕ್ನಿಂದಾಗಿ ಅಂಗನವಾಡಿ ಕೇಂದ್ರಗಳ ಮೇಲೆ ಎಫೆಕ್ಟ್
ಕೇಂದ್ರ ಸರ್ಕಾರದ ಮುಂದೆ ತಮ್ಮ ಬೇಡಿಕೆಗಳನ್ನು ಮಂಡಿಸಿ ಮಾಡುತ್ತಿರುವ ಸ್ಟ್ರೈಕ್ನಿಂದಾಗಿ ಅಂಗನವಾಡಿ ಕೇಂದ್ರಗಳು ಮತ್ತು ಮಧ್ಯಾಹ್ನದ ಬಿಸಿಯೂಟ ಸೇವೆಗಳ ಮೇಲೆ ಪರಿಣಾಮ ಬೀಳುತ್ತಿದ್ದು, ಕಾರ್ಮಿಕರು ಮತ್ತು ಸಹಾಯಕರ ಪ್ರತಿಭಟನೆಯ ಹಿನ್ನೆಲೆ ಮಲ್ಲೇಶ್ವರಂ ಪೊಲೀಸ್ ಠಾಣೆ ಮತ್ತು ಬೆನ್ಸನ್ ಟೌನ್ ಬಳಿಯ ಅಂಗನವಾಡಿ ಕೇಂದ್ರಗಳನ್ನು ಮುಚ್ಚಲಾಗಿತ್ತು. ಅದೇ ರೀತಿ, ಮಂಡ್ಯ, ಹುಬ್ಬಳ್ಳಿ, ತುಮಕೂರು ಮತ್ತು ಇತರ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.
ಮುಷ್ಕರದ ಕುರಿತು ಮಾತನಾಡಿರುವ ಕರ್ನಾಟಕ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ನ ಅಧ್ಯಕ್ಷೆ ಎಸ್ ವರಲಕ್ಷ್ಮಿ, ಈ ಮುಷ್ಕರ ನಡೆಸುವುದು ಪ್ರಜ್ಞಾಪೂರ್ವಕ ನಿರ್ಧಾರವಾಗಿತ್ತು. ಅಂಗನವಾಡಿಗಳು, ಮಧ್ಯಾಹ್ನದ ಊಟ ಮತ್ತು ಆರೋಗ್ಯ ಸೇವೆಗಳ ಮೇಲೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪರಿಣಾಮ ಬೀರಿದೆ. ಆದರೆ ಈ ಕಾರ್ಮಿಕರು ಸಹ ಮುಷ್ಕರ ನಡೆಸುವ ದಿನಗಳ ಸಂಖ್ಯೆಗೆ ವೇತನ ನೀಡದ ಕಾರಣ ಬೆಲೆ ತೆರುತ್ತಿದ್ದಾರೆ ಎಂದು ಹೇಳಿದರು.
ಕಡಿಮೆ ವೇತನಕ್ಕೂ ಪರಿಹಾರ ಕೋರಿದ ಕಾರ್ಯಕರ್ತೆಯರು
ವೇತನ, ಕೈಗಾರಿಕಾ ಸಂಬಂಧಗಳು, ಸಾಮಾಜಿಕ ಭದ್ರತೆ, ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಕುರಿತು ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳಲ್ಲಿ ಕೇಂದ್ರ ಸರ್ಕಾರ ನಮ್ಮನ್ನು ಸೇರಿಸಬೇಕೆಂದು ನಾವು ಬಯಸುತ್ತೇವೆ. ಈ ಎಲ್ಲಾ ಕಾರ್ಮಿಕರನ್ನು ವಿವಿಧ ಯೋಜನೆಗಳ ಅಡಿಯಲ್ಲಿ ನೇಮಿಸಲಾಗಿದೆ. ಸರ್ಕಾರವು ನೌಕರರಿಗೆ ಭವಿಷ್ಯ ನಿಧಿ ಮತ್ತು ಇಎಸ್ಐನಂತಹ ಎಲ್ಲಾ ಪ್ರಯೋಜನಗಳನ್ನು ಒದಗಿಸಬೇಕು ಮತ್ತು ಉದ್ಯೋಗ ಭದ್ರತೆಯನ್ನು ನೀಡಬೇಕು ಎಂದು ನಾವು ಬಯಸುತ್ತೇವೆ” ಎಂದು ವರಲಕ್ಷ್ಮಿ ಹೇಳಿದ್ದಾರೆ.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಲಿನಿ ಮೇಸ್ತ, ಮಧ್ಯಾಹ್ನ ಬಿಸಿಯೂಟ, ಐಸಿಡಿಎಸ್ ಮತ್ತು ಆಶಾ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಬಜೆಟ್ ಹೆಚ್ಚಿಸಬೇಕು. ಮಧ್ಯಾಹ್ನ ಬಿಸಿಯೂಟ ಕಾರ್ಮಿಕರ ವೇತನ 4,700 ರೂ. ಆಗಿದ್ದು, ಅದರಲ್ಲಿ ಕೇಂದ್ರ ಸರ್ಕಾರ 600 ರೂ. ಪಾವತಿಸುತ್ತದೆ. ಉಳಿದ ಹಣವನ್ನು ರಾಜ್ಯ ಸರ್ಕಾರ ಭರಿಸುತ್ತದೆ. 2009 ರಿಂದ ಅವರ ಸಂಬಳ ಹೆಚ್ಚಿಲ್ಲ. ಅದೇ ರೀತಿ, 2018 ರಿಂದ ಅಂಗನವಾಡಿ ಕಾರ್ಯಕರ್ತೆಯರ ಸಂಬಳವೂ ಹೆಚ್ಚಿಲ್ಲ. ಅವರ ಸಂಬಳ 11,500 ರಿಂದ 12,000 ರೂ.ಗಳಾಗಿದ್ದು, ಇದರಲ್ಲಿ ಕೇಂದ್ರದ ಪಾಲು 2,700 ರೂ. ಸಹಾಯಕಿಯರ ಸಂಬಳ 7,000 ರೂ. ಆಗಿದ್ದು , ಅದರಲ್ಲಿ ಕೇಂದ್ರವು 2,000 ರೂ.ಗಳನ್ನು ನೀಡುತ್ತದೆ ಎಂದಿದ್ದಾರೆ.





