‘ಅಖಂಡ 2’ಗೆ ಸಿಕ್ಕಿತು ತೆಲಂಗಾಣ ಸರ್ಕಾರದ ಅನುಮತಿ ಆದರೆ…

Share with

ನಂದಮೂರಿ ಬಾಲಕೃಷ್ಣ (Nandamuri Balakrishna) ನಟನೆಯ ‘ಅಖಂಡ 2’ ಸಿನಿಮಾ ನಾಳೆ (ಡಿಸೆಂಬರ್ 05) ಬಿಡುಗಡೆ ಆಗುತ್ತಿದೆ. ಕರ್ನಾಟಕ, ಆಂಧ್ರಗಳಲ್ಲಿ ಇಂದೇ ಸಿನಿಮಾದ ಪ್ರೀಮಿಯರ್ ಶೋಗಳನ್ನು ಆಯೋಜಿಸಲಾಗಿದ್ದು, ಆಂಧ್ರ ಪ್ರದೇಶದಲ್ಲಿ ಪ್ರೀಮಿಯರ್ ಶೋ ಟಿಕೆಟ್ ದರಗಳನ್ನು 600ಕ್ಕೆ ನಿಗದಿ ಪಡಿಸಲಾಗಿದೆ. ಆದರೆ ಕರ್ನಾಟಕದಲ್ಲಿ 1950 ಗರಿಷ್ಠ ದರದಿಂದ ಆರಂಭಿಸಿ, 1000, 900, 700, 600 ಹೀಗೆ ಮನಸೋ ಇಚ್ಛೆ ದರಗಳನ್ನು ನಿಗದಿ ಪಡಿಸಲಾಗಿದೆ. ಆದರೆ ತೆಲಂಗಾಣ ಸರ್ಕಾರ ಡಿಸೆಂಬರ್ 4ರ ಮಧ್ಯಾಹ್ನದ ವರೆಗೂ ‘ಅಖಂಡ 2’ ಸಿನಿಮಾದ ಟಿಕೆಟ್ ದರಗಳ ಕುರಿತು ಅಧಿಕೃತ ಆದೇಶ ಹೊರಡಿಸಿರಲಿಲ್ಲ. ಆದರೆ ಕೊನೆಗೂ ಸಂಜೆ ವೇಳೆಗೆ ಅಧಿಕೃತ ಆದೇಶ ಹೊರಬಿದ್ದಿದ್ದು, ಟಿಕೆಟ್ ದರ ಹೆಚ್ಚಳಕ್ಕೆ ಹಾಗೂ ವಿಶೇಷ ಶೋಗೆ ಅನುಮತಿ ನೀಡಲಾಗಿದೆ. ಆದರೆ ಒಂದು ಷರತ್ತು ಸಹ ವಿಧಿಸಲಾಗಿದೆ.

‘ಪುಷ್ಪ 2’ ಸಿನಿಮಾದ ಪ್ರೀಮಿಯರ್ ಶೋ ವೇಳೆ ನಡೆದ ಅವಘಡದ ಬಳಿಕ ಸಿನಿಮಾಗಳ ಪ್ರೀಮಿಯರ್ ಶೋಗಳ ಬಗ್ಗೆ ಕೆಲ ಕಠಿಣ ನಿಯಮಗಳನ್ನು ತೆಲಂಗಾಣ ಸರ್ಕಾರ ವಿಧಿಸಿದೆ. ಅದರಂತೆ ಇದೀಗ ‘ಅಖಂಡ 2’ ಸಿನಿಮಾಕ್ಕೆ ವಿಶೇಷ ಶೋಗೆ ಅನುಮತಿ ನೀಡಲಾಗಿದೆಯಾದರೂ ರಾತ್ರಿ ಶೋಗಳ ಬದಲಿಗೆ ಬೆಳಿಗಿನ ಶೋಗೆ ಅನುಮತಿ ನೀಡಲಾಗಿದ್ದು, ಟಿಕೆಟ್ ದರ ಜಿಎಸ್ಟಿ ಸೇರಿದಂತೆ 600 ರೂಪಾಯಿ ದಾಟಬಾರದೆಂದು ನಿಬಂಧನೆ ವಿಧಿಸಲಾಗಿದೆ. ಆದರೆ, ಬುಕ್ ಮೈ ಶೋ ನಲ್ಲಿ ಡಿಸೆಂಬರ್ 04ರ ಸಂಜೆ 7 ಗಂಟೆಯಲ್ಲಿಯೂ ‘ಅಖಂಡ 2’ ಸಿನಿಮಾದ ಟಿಕೆಟ್ ಬುಕಿಂಗ್ ಓಪನ್ ಆಗಿಲ್ಲ. ಇದು ಸಿನಿಮಾದ ಕಲೆಕ್ಷನ್ ಮೇಲೆ ಭಾರಿ ಪರಿಣಾಮ ಬೀರಲಿದೆ.

ಸ್ಪೆಷಲ್ ಶೋಗೆ 600 ರೂಪಾಯಿ ಟಿಕೆಟ್ ದರ ನಿಗದಿ ಮಾಡಿದ್ದರೂ ಸಹ, ಡಿಸೆಂಬರ್ 5ರಿಂದ ಮುಂದಿನ ಮೂರು ದಿನಗಳ ಕಾಲ ಮಲ್ಟಿಪ್ಲೆಕ್ಸ್ನಲ್ಲಿ 100 ರೂಪಾಯಿ ಮತ್ತು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ 50 ರೂಪಾಯಿ ಟಿಕೆಟ್ ದರ ಹೆಚ್ಚಳ ಮಾಡಿಕೊಳ್ಳಲು ಸಹ ಅನುಮತಿಯನ್ನು ನೀಡಲಾಗಿದೆ. ಈ ಟಿಕೆಟ್ ದರ ಹೆಚ್ಚಳ ಸಿನಿಮಾ ಬಿಡುಗಡೆ ಆದ ಮೂರು ದಿನಗಳ ವರೆಗೆ ಮಾತ್ರವೇ ಇರಲಿದೆ.

ಇನ್ನು ಇದರ ಜೊತೆಗೆ ಮತ್ತೊಂದು ಪ್ರಮುಖ ನಿಬಂಧನೆಯನ್ನು ತೆಲಂಗಾಣ ಸರ್ಕಾರ ಇರಿಸಿದೆ. ಸಿನಿಮಾದ ಪ್ರೀಮಿಯರ್ ಶೋ ಅಥವಾ ವಿಶೇಷ ಶೋನಲ್ಲಿ ಗಳಿಕೆಯಾದ ಒಟ್ಟು ಕಲೆಕ್ಷನ್ನಲ್ಲಿ 20% ಹಣವನ್ನು ಚಿತ್ರಕಾರ್ಮಿಕರ ಕಲ್ಯಾಣ ನಿಧಿಗೆ ನೀಡಬೇಕು ಎಂದು ಸಹ ಸೂಚಿಸಲಾಗಿದೆ. ಕೆಲ ವಾರಗಳ ಸಿನಿಮಾ ಕಾರ್ಮಿಕರ ಸಂಘ ಆಯೋಜಿಸಿದ್ದ ಸಭೆಯಲ್ಲಿ ಕಾರ್ಮಿಕರ ಕಲ್ಯಾಣ ನಿಧಿಯ ಬಗ್ಗೆ ಸಿಎಂ ರೇವಂತ್ ರೆಡ್ಡಿ ಪ್ರಸ್ತಾಪಿಸಿದ್ದರು. ಅದರಂತೆ ಈಗ ‘ಅಖಂಡ 2’ ಸಿನಿಮಾದ ಕಲೆಕ್ಷನ್ನ (ವಿಶೇಷ ಶೋ ಕಲೆಕ್ಷನ್) 20% ಕಾರ್ಮಿಕರ ಕಲ್ಯಾಣಕ್ಕೆ ನೀಡುವಂತೆ ಆದೇಶದಲ್ಲಿಯೇ ಸೂಚಿಸಲಾಗಿದೆ.


Share with

Leave a Reply

Your email address will not be published. Required fields are marked *