ಮಗಳ ಮೇಲೆ ಅನುಮಾನ, ಕೈಕಾಲು ಕಟ್ಟಿ ಕಾಲುವೆಗೆ ಎಸೆದ ತಂದೆ, ಎರಡು ತಿಂಗಳ ಬಳಿಕ ಆಗಿದ್ದೇನು?

Share with

ಚಂಡೀಗಢ, ಡಿಸೆಂಬರ್ 08: ವ್ಯಕ್ತಿಯೊಬ್ಬ ಮಗಳ ಚಾರಿತ್ರ್ಯದ ಮೇಲೆ ಅನುಮಾನ ಪಟ್ಟು ಆಕೆಯ ಕೈಕಾಲು ಕಟ್ಟಿ ಕಾಲುವೆಗೆ ಎಸೆದಿರುವ ಘಟನೆ ಚಂಡೀಗಢದಲ್ಲಿ ನಡೆದಿದೆ. ವಿಪರ್ಯಾಸವೆಂದರೆ ಆಕೆಯ ಎರಡು ತಿಂಗಳ ಬಳಿಕ ಪ್ರತ್ಯಕ್ಷವಾಗಿದ್ದಾಳೆ. ಹಾಗಾದರೆ ಅಂದು ನಡೆದಿದ್ದೇನು, ಆಕೆ ಬದುಕಿದ್ಹೇಗೆ ಈ ಕುರಿತು ಮಾಹಿತಿ ಇಲ್ಲಿದೆ. ಫಿರೋಜ್ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 17 ವರ್ಷದ ಮಗಳನ್ನು ತಂದೆ(Father)ಯೊಬ್ಬ ಕೈ ಕಾಲು ಕಟ್ಟಿ ಕಾಲುವೆಗೆ ಎಸೆದಿದ್ದ. ಆಕೆ ಶಾಲೆ ಬಿಟ್ಟಿದ್ದಳು, ನಾಲ್ವರು ಹೆಣ್ಣುಮಕ್ಕಳ ಪೈಕಿ ಆಕೆ ಮೊದಲನೆಯವಳಾಗಿದ್ದಳು. ಆಕೆಯನ್ನು ಕಾಲುವೆಗೆ ಎಸೆದು ಅದನ್ನು ವಿಡಿಯೋ ಕೂಡ ಮಾಡಿಕೊಂಡಿದ್ದ.


ಇದೀಗ ಆಕೆ ಮಾಧ್ಯಮದವರ ಮುಂದೆ ಬಂದು ತಾನು ಪಟ್ಟ ಕಷ್ಟವನ್ನು ಎಲ್ಲರಿಗೂ ವಿವರಿಸಿದ್ದು, ಬದುಕಿ ಬಂದಿದ್ಹೇಗೆ ಎನ್ನುವ ಕುರಿತು ಮಾಹಿತಿ ನೀಡಿದ್ದಾಳೆ. ಸೆಪ್ಟೆಂಬರ್ 29ರಂದು ಈ ಘಟನೆ ನಡೆದಿತ್ತು ತಂದೆ ಆಕೆಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದ, ಕೂಡಲೇ ಆಕೆಯನ್ನು ಎಳೆದುಕೊಂಡು ಹೋಗಿ ಕಾಲುವೆಗೆ ನೂಕಿದ್ದ. ಬಾಲಕಿಯ ಸಂಬಂಧಿಯ ದೂರಿನ ಮೇರೆಗೆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. ಅಂದಿನಿಂದ ಆತ ನ್ಯಾಯಾಂಗ ಬಂಧನದಲ್ಲಿದ್ದ.

ಕಾಲುವೆ ಉಕ್ಕಿ ಹರಿಯುತ್ತಿತ್ತು, ಕೈಯಲ್ಲಿರುವ ಹಗ್ಗ ಸಡಿಲಗೊಂಡಿತ್ತು.ಅಸಹಾಯಕಳಾಗಿ ತೇಲುತ್ತಿದ್ದಳು, ಕಬ್ಬಿಣದ ಸರಳೊಂದಕ್ಕೆ ಆಕೆ ಡಿಕ್ಕಿ ಹೊಡೆದಿದ್ದಳು,  ಅದೇ ಆಕೆಗೆ ಜೀವರಕ್ಷಕವಾಯಿತು. ಅದನ್ನು ಹಿಡಿದು ಆಕೆ ದಡ ತಲುಪಿದ್ದಳು. ನಂತರ ಮೂವರು ದಾರಿ ಹೋಕರು ಆಕೆಯನ್ನು ಗುರುತಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು, ಎರಡು ತಿಂಗಳುಗಳ ಕಾಲ ಅಲ್ಲೇ ಆಶ್ರಯ ಪಡೆದಿದ್ದಳು. ತಾನು ಅನಾರೋಗ್ಯದಿಂದ ಬಳಲುತ್ತಿದ್ದೆ ಎಂದು ಆಕೆ ಹೇಳಿದ್ದಾಳೆ.

ಆಕೆ ತಂದೆಯನ್ನು ಬಿಡುಗಡೆ ಮಾಡುವಂತೆ ಅಧಿಕಾರಿಗಳನ್ನು ಕೇಳಿಕೊಂಡಿದ್ದಾಳೆ. ತನ್ನ ತಂಗಿಯರನ್ನು ನೋಡಿಕೊಳ್ಳಲು ಯಾರೂ ಇಲ್ಲ ಎಂದು ಕಣ್ಣೀರಿಟ್ಟಿದ್ದಾಳೆ. ನನ್ನ ಮೇಲೆ ಹಲ್ಲೆ ನಡೆಸುವ ಸಮಯದಲ್ಲಿ ಆತ ಮದ್ಯಪಾನ ಮಾಡಿದ್ದ, ಕೋಪದಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದ ಎಂದು ಆಕೆ ಹೇಳಿದ್ದಾಳೆ. ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ, ಈ ಸಾಕ್ಷ್ಯವು ಕೊಲೆ ಪ್ರಕರಣವನ್ನು ಕೊಲೆಯತ್ನ ಪ್ರಕರಣಕ್ಕೆ ಇಳಿಸುವ ಸಾಧ್ಯತೆ ಇದೆ.


Share with

Leave a Reply

Your email address will not be published. Required fields are marked *