ಕೊಚ್ಚಿ: ಯುವ ನಟನೊಬ್ಬ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ರಾಜ್ಯ ಪ್ರಶಸ್ತಿ ವಿಜೇತ ಅಖಿಲ್ ವಿಶ್ವನಾಥ್ (30) ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿರುವ ಬಗ್ಗೆ ವರದಿಯಾಗಿದೆ.
ತಾಯಿ ಗೀತಾ ಅವರು ಕೆಲಸಕ್ಕೆ ತೆರಳುವ ಮೊದಲು ಮಗನ ಕೋಣೆಗೆ ಹೋಗಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಅಖಿಲ್ ವಿಶ್ವನಾಥ್ (Akhil Vishwanath) ಸನಲ್ ಕುಮಾರ್ ಶಶಿಧರನ್ ಅವರ ‘ಚೋಳ’ ಚಿತ್ರದಲ್ಲಿ ಅವರು ನಾಯಕನ ಪಾತ್ರದಲ್ಲಿ ನಟಿಸಿದ್ದರು. ಇದಾದ ಬಳಿಕ ‘ಆಪರೇಷನ್ ಜಾವಾ’ ಸಿನಿಮಾದಲ್ಲಿ ನಟಿಸಿದ್ದರು.
ತಮ್ಮ ವೃತ್ತಿಜೀವನದ ಆರಂಭದಲ್ಲಿ, ಅಖಿಲ್ ಮತ್ತು ಅವರ ಸಹೋದರ ಅರುಣ್ ಟೆಲಿಫಿಲ್ಕ್ ‘ಮಾಂಗಾಂಡಿ’ನಲ್ಲಿನ ಅಭಿನಯಕ್ಕಾಗಿ ಕೇರಳ ರಾಜ್ಯ ಸರ್ಕಾರದ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿಯನ್ನು ಪಡೆದಿದ್ದರು.
ಇತ್ತೀಚೆಗೆ ಅಖಿಲ್ ಸಿನಿಮಾದಿಂದ ದೂರವಾಗಿ ಕೊಟ್ಟಾಲಿಯಲ್ಲಿರುವ ಮೊಬೈಲ್ ಫೋನ್ ಅಂಗಡಿಯಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದರು.
ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಅವರ ನಿಧನದ ಸುದ್ದಿ ಕೇಳಿ ನಿರ್ದೇಶಕ ಸನಲ್ ಕುಮಾರ್ ಶಶಿಧರನ್, ‘ಚೋಳ’ದ ಸಹ ನಟ ಜೋಜು ಜಾರ್ಜ್ ಅನೇಕರು ಆಘಾತಕ್ಕೆ ಒಳಗಾಗಿದ್ದು, ಸಂತಾಪ ಸೂಚಿಸಿದ್ದಾರೆ.
ಅಖಿಲ್ ಸಾವಿನ ಬಗ್ಗೆ ಒಂದಷ್ಟು ಅನುಮಾನಗಳು ಮೂಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.




