ಉದ್ಯೋಗ ಕೊಡಿಸುವುದಾಗಿ ನಂಬಿಸಿ ಅರ್ಮೇನಿಯ ದೇಶಕ್ಕೆ ಕರೆಸಿಕೊಂಡು ವಂಚನೆ..!

Share with

ಮಂಗಳೂರು: ಲಕ್ಷಾಂತರ ರೂ. ಸಂಬಳ ಇರುವ ಕೆಲಸ ಕೊಡಿಸುವುದಾಗಿ ನಂಬಿಸಿ ಅರ್ಮೇನಿಯಾ ದೇಶಕ್ಕೆ ಕರೆಸಿ ವಂಚಿಸಿದ್ದಾರೆ ಎಂದು ಆರೋಪಿಸಿ ಮೂವರು ಯುವಕರು ಬಜಪೆ ಮತ್ತು ಕದ್ರಿ ಠಾಣೆಗೆ ದೂರು ನೀಡಿದ್ದಾರೆ.

ಮಂಜುನಾಥ ನಾಯ್ಕ, ಉಮೇಶ್ ಮತ್ತು ಗಗನ್ ಡಿ. 4ರಂದು ಅರ್ಮೇನಿಯಾದಿಂದ ವಾಪಾಸು ಬಂದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಪರಿಚಿತ ರಾಕೇಶ್ ರೈ ಎಂಬಾತ ಅರ್ಮೇನಿಯಾದಲ್ಲಿ ಉದ್ಯೋಗ ಇದೆ. ಅಮೆರಿಕನ್ ಕಂಪೆನಿಯಲ್ಲಿ ಕೆಲಸ ಕೊಡಿಸುವೆ ಎಂದು ನಂಬಿಸಿದ್ದ. ಅದರಂತೆ 2.25 ಲಕ್ಷ ರೂ. ಪಡೆದು ವಿಸಿಟಿಂಗ್ ವೀಸಾ ಕಳುಹಿಸಿದ್ದ. ಅ.8ರಂದು ಅಲ್ಲಿಗೆ ಹೋಗಿದ್ದು, ಅಲ್ಲಿ ರಾಕೇಶ್ ಜತೆಗೆ ಇತರ ಇಬ್ಬರು ನಮ್ಮನ್ನು ಕರೆದೊಯ್ಯಲು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಬಾಡಿಗೆ ಕೊಠಡಿ ಮಾಡಿಕೊಟ್ಟರು.

ವಾರ ಕಳೆದರೂ ಕೆಲಸ ಕೊಡಿಸಲಿಲ್ಲ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಅಲ್ಲಿ ಕೂಲಿ ಕೆಲಸಕ್ಕೆ ಸೇರಬೇಕಾಯಿತು. ಬಳಿಕ ಅದು ಬಡ ರಾಷ್ಟ್ರ ಎಂದು ತಿಳಿಯಿತು. ಕೊನೆಗೆ ನಾವು ಹೇಗೋ ತಪ್ಪಿಸಿಕೊಂಡು ಊರಿಗೆ ಬಂದೆವು. ಇಲ್ಲಿದ್ದ ಒಳ್ಳೆಯ ಕೆಲಸವನ್ನು ಬಿಟ್ಟು ಲಕ್ಷಾಂತರ ರೂ. ಸಂಬಳ ಸಿಗುತ್ತದೆಂಬ ಆಸೆಯಿಂದ ಅಲ್ಲಿಗೆ ಹೋಗಿದ್ದೆವು. ವಿಸಿಟಿಂಗ್ ವೀಸಾದಲ್ಲಿ 21 ದಿನ ಮಾತ್ರ ವಾಸ್ತವ್ಯಕ್ಕೆ ಅವಕಾಶವಿದ್ದು, ನಾವು ಹೆಚ್ಚುವರಿಯಾಗಿ ಉಳಿದದ್ದಕ್ಕೆ ದಂಡ ಹಾಕಿದ್ದರು. ದಂಡ ಕಟ್ಟಲು ಹಣವಿಲ್ಲದೆ, ಮತ್ತೆ ವಾಪಾಸು ಬರುವುದಿಲ್ಲ ಎಂದು ಹೇಳಿ ಬರೆದುಕೊಟ್ಟು ಬಂದಿದ್ದೇವೆ. ಅವರು ನಮ್ಮನ್ನು ನಿಷೇಧಿಸಿದ್ದರಿಂದ ಬೇರೆ ದೇಶಗಳಿಗೆ ಹೋಗಲೂ ಸಮಸ್ಯೆ ಆಗಬಹುದು ಎಂದು ಮಂಜುನಾಥ ನಾಯ್ಕ ದೂರಿನಲ್ಲಿ ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *