ಮಂಗಳೂರು: ಇಲ್ಲಿನ ಮೀನುಗಾರಿಕೆ ಬಂದರಿನಿಂದ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ‘ಮೈಶಾ-2’ ಹೆಸರಿನ ಮೀನುಗಾರಿಕಾ ಬೋಟ್ ಡಿ.20ರ ಶನಿವಾರ ಬೆಳಗ್ಗಿನ ಜಾವ ಮುರುಡೇಶ್ವರ ಸಮೀಪ ಮುಳುಗಡೆಯಾಗಿದೆ.

ನಗರದ ಬಂದರು ಅಜಿಜುದ್ದೀನ್ ರಸ್ತೆ ನಿವಾಸಿ ಮೊಹಮ್ಮದ್ ಶರೀಕ್ ಉಲ್ ಇಸ್ಲಾಂ ಎಂಬವರಿಗೆ ಸೇರಿದ ಬೋಟ್ ಇದಾಗಿದ್ದು, ಡಿ.16ರಂದು 6 ಮಂದಿ ಮೀನುಗಾರರು ಮತ್ತು ಆಂಧ್ರ ಪ್ರದೇಶ ಮೂಲದ ಚಾಲಕ ವಾವಿಲ ಎಂಬವರು ಮೀನುಗಾರಿಕೆ ಬಂದರಿನಿಂದ ತೆರಳಿದ್ದರು.
ಡಿ.20 ರಂದು ಮುರುಡೇಶ್ವರದಿಂದ ಸುಮಾರು 14 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ನಸುಕಿನ ಜಾವ 3.15ರ ವೇಳೆಗೆ ಸಮುದ್ರದ ರಭಸವಾದ ಅಲೆಗೆ ಸಿಕ್ಕಿದ ಪರಿಣಾಮ ಬೋಟ್ ಮುಳುಗಡೆಯಾಗಿದೆ.
ಬೋಟ್ ನಲ್ಲಿದ್ದ ಮೀನುಗಾರರ ಸಹಾಯಕ್ಕೆ ಇನ್ನೊಂದು ಬೋಟಿನವರು ಬಂದಿದ್ದು, ಮುಳುಗಿದ ಬೋಟ್ ನಲ್ಲಿದ್ದವರೆಲ್ಲರೂ ಸುರಕ್ಷಿತವಾಗಿ ದಡಕ್ಕೆ ಬಂದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




