ಬೆಳ್ತಂಗಡಿ: ಕನ್ಯಾಡಿ ಗ್ರಾಮದ ಅಂಡೀರುಮಾರು ನಿವಾಸಿ ಮಂಜಪ್ಪ ನಾಯ್ಕ(62) ಎಂಬವವರ ಮೇಲೆ ಶುಕ್ರವಾರ (ಜ.16) ಬೆಳಗ್ಗೆ ಚಿರತೆಯೊಂದು ದಾಳಿ ನಡೆಸಿದ ಘಟನೆ ನಡೆದಿದೆ.

ಬೆಳಗ್ಗೆ 8:15 ಗಂಟೆಗೆ ಮನೆಯ ಅಂಗಳದಲ್ಲಿದ್ದಾಗ ಏಕಾಏಕಿ ಚಿರತೆ ದಾಳಿ ನಡೆಸಿದ್ದು ತತ್ ಕ್ಷಣ ಮಂಜಪ್ಪ ಜೀವರಕ್ಷಣೆಗಾಗಿ ಹತ್ತಿರದ ಅಡಿಕೆ ಮರ ಏರಿದ್ದು, ಈ ವೇಳೆ ಅವರ ಕಾಲಿಗೆ ಗಂಭೀರ ಗಾಯಗಳಾಗಿದೆ. ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಗೆ ಬೆಳ್ತಂಗಡಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಮಂಜಪ್ಪ ನಾಯ್ಕ ಅವರ ಮಗ ಪ್ರಭಾಕರ ನಾಯ್ಕ ಅವರು ತಂದೆಯ ಮೇಲೆ ಚಿರತೆ ದಾಳಿಯ ವಿಚಾರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಕೆಲ ಸಮಯ ವಾಗ್ವಾದ ನಡೆಯಿತು.
ಮುಂಡಾಜೆ ಸೀಟು ಮೂರು ಮಾರ್ಗದ ಬಳಿ ಶಾಲಾ ಬಾಲಕನಿಗೆ ಚಿರತೆ ಎದುರಾಗಿದೆ. ಕಾನರ್ಪ ಪರಿಸರದಲ್ಲಿಯೂ ನಾಲ್ಕು ಮರಿಗಳ ಸಹಿತ ಚಿರತೆ ಕಾಣಿಸಿಕೊಂಡಿರುವ ಜನರ ಆತಂಕಕ್ಕೆ ಕಾರಣವಾಗಿದೆ.




