ಸುಳ್ಯ: ಅಪಾಯಕಾರಿ ತಿರುವಿನಲ್ಲಿ ಬೈಕ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೋರಿಯಿಂದ ಕೆಳಕ್ಕೆ ಉರುಳಿ ಬಿದ್ದ ಪರಿಣಾಮ ಮಗ ಮೃತಟ್ಟಿದ್ದು, ತಂದೆ ಗಂಭೀರ ಗಾಯಗೊಂಡ ಘಟನೆ ಬೆಳ್ಳಾರೆ – ಸುಳ್ಯ ಮುಖ್ಯ ರಸ್ತೆಯ ಕಲ್ಲೋಣಿ ಎಂಬಲ್ಲಿ ಇಂದು ಮಂಗಳವಾರ ಬೆಳಗ್ಗೆ ಸಂಭವಿಸಿದೆ.

ಕಡಬ ತಾಲೂಕಿನ ಮರ್ಧಾಳ ಸಮೀಪದ ಕೊಲ್ಯ ಮೋನಪ್ಪ ಅವರ ಪುತ್ರ ನಿಶಾಂತ್ (24) ಮೃತರು. ಜತೆಗಿದ್ದ ನಿಶಾಂತ್ ತಂದೆ ಮೋನಪ್ಪ ಅವರು ಗಂಭೀರ ಗಾಯಗೊಂಡಿದ್ದಾರೆ.
ಶಬರಿಮಲೆ ಪ್ರಸಾದವನ್ನು ಸುಳ್ಯದ ಸಂಬಂಧಿಕರಿಗೆ ನೀಡಲು ತಂದೆ, ಮಗ ಬೈಕಿನಲ್ಲಿ ಸುಳ್ಯ ಕಡೆಗೆ ಬರುತ್ತಿದ್ದಾಗ ಈ ಘಟನೆ ನಡೆದಿದೆ. ತಿರುವಿನಲ್ಲಿ ನಿಯಂತ್ರಣ ತಪ್ಪಿ ಅಥವಾ ಇನ್ನೊಂದು ವಾಹನಕ್ಕೆ ಅಪಘಾತ ಆಗುವುದನ್ನು ತಪ್ಪಿಸುವ ಭರದಲ್ಲಿ ಘಟನೆ ಸಂಭವಿಸಿರುವ ಬಗ್ಗೆ ಶಂಕಿಸಲಾಗಿದೆ.
ನಿಶಾಂತ್ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರ ಗಾಯಗೊಂಡ ಸಹಸವಾರ ಮೋನಪ್ಪ ಅವರನ್ನು ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ಬೆಳ್ಳಾರೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.




