ಉಪ್ಪಳ: ಕೊಂಡೆವೂರು ಮಠದಲ್ಲಿ ಯಶಸ್ವಿಯಾಗಿ ನೆರವೇರಿದ ಕೊರಗ ಸಮಾಜ ಸಂಗಮ

Share with

ಉಪ್ಪಳ: ಕಾಸರಗೋಡು ಜಿಲ್ಲೆ ಕೊರಗ ಸಮಾಜ ಸಂಗಮ ಸಮಿತಿ ಆಶ್ರಯದಲ್ಲಿ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕೊರಗ ಸಮಾಜ ಸಂಗಮ-2023 ಕಾರ್ಯಕ್ರಮ ಡಿ.31ರಂದು ಕೊಂಡೆವೂರು ಮಠದಲ್ಲಿ ಭಾರೀ ಅದ್ದೂರಿಯಾಗಿ ನಡೆಯಿತು.

ಕೊರಗ ಸಮಾಜ ಸಂಗಮ 2023 ಕಾರ್ಯಕ್ರಮದಲ್ಲಿ ಸಭೆ

ಆರಂಭದಲ್ಲಿ ಉಪ್ಪಳ ಪೇಟೆಯಿಂದ ನೂರಾರು ಮಂದಿ ಸಮಾಜದವರನ್ನು ಶೋಭಾಯಾತ್ರೆಯ ಮೂಲಕ ಕೊಂಡೆವೂರು ಮಠಕ್ಕೆ ಬರಮಾಡಿಕೊಂಡರು. ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಹಾಗೂ ಮುಂಬಯಿ ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಶೋಭಾ ಯಾತ್ರೆಗೆ ಚಾಲನೆ ನೀಡಿದರು. ಸ್ವಾಮೀಜಿ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಶೋಭಾಯಾತ್ರೆ ನಡೆಯಿತು.

ಸ್ವಾಮೀಜಿ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಶೋಭಾಯಾತ್ರೆ ನಡೆಯಿತು.

ಈ ವೇಳೆ ಸಮಾಜದ ಮಕ್ಕಳ ಕುಣಿತ ಭಜನೆ, ಕೊರಗ ನೃತ್ಯ, ಮುತ್ತುಕೊಡೆ, ಡೋಲು ಸಹಿತ ಹಲವು ಸಾಂಸ್ಕೃತಿಕ ಕೃತಿಗಳು ಶೋಭಾಯಾತ್ರೆಗೆ ಮೆರಗನ್ನು ನೀಡಿತು. ಬಳಿಕ ಮಠದಲ್ಲಿ ನಡೆದ ಕೊರಗ ಸಮಾಜ ಸಂಗಮ 2023 ಕಾರ್ಯಕ್ರಮವನ್ನು ಭಾರತ ಸರಕಾರದ ರಾಜ್ಯಸಭಾ ಸದಸ್ಯರಾದ ಕೆ.ನಾರಾಯಣ ಬೆಂಗಳೂರು ದೀಪ ಪ್ರಜ್ವಲನೆಗೊಳಿಸುವ ಮೂಲಕ ಉದ್ಘಾಟಿಸಿದರು.

ಕ್ಯಾಂಪ್ಕೋ ನಿರ್ದೇಶಕ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದರು. ಕಟೀಲು ಕ್ಷೇತ್ರದ ಅನುವಂಶಿಕ ಪ್ರಧಾನ ಅರ್ಚಕರಾದ ಬ್ರಹ್ಮಶ್ರೀ ಅನಂತಪದ್ಮನಾಭ ಅಸ್ರಣ್ಣರು ಮತ್ತು ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಶಶಿಧರ ಶೆಟ್ಟಿ ಗ್ರಾಮ ಚಾವಡಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಸಮಾಜಸೇವಕ ಅಶೋಕ್ ಕುಮಾರ್ ಹೊಳ್ಳ, ಕೊರಗ ಸಮಾಜ ಸಂಗಮ ಸಮಿತಿಯ ಅಧ್ಯಕ್ಷ ಸಂಜೀವ ಪುಳಿಕೂರು ಹಾಗೂ ಸಮಾಜದ ಹಿರಿಯ ಮುಖ್ಯಸ್ಥರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕೊರಗ ಸಮಾಜದಿಂದ ಉನ್ನತ ಶಿಕ್ಷಣ ಪಡೆದು ಶಿಕ್ಷಣ ಸಾಧನೆ ಮಾಡಿದ ಸರಿತಾ ಬಾಯಾರು, ಮೀನಾಕ್ಷಿ, ಶೋಭಿತ ಪುಳಿಕೂರು, ಹಿಂದಿ ರಾಮಾಯಣ ಸ್ಪರ್ಧೆಯಲ್ಲಿಪ್ರಥಮ ಸ್ಥಾನ ಪಡೆದ ಮಹಾಲಕ್ಷ್ಮಿ ಗೌರೀ ಮೂಲೆ, ಕ್ರೀಡಾಪಟುಗಳಾದ ದಿನೇಶ್ ಪುಳಿಕೂರು, ರಘುನಾಥ ಕುಳೂರು ಇವರನ್ನು ವೇದಿಕೆಯಲ್ಲಿ ಗಣ್ಯರು ಸನ್ಮಾನಿಸಿದರು.

ಕುಮಾರಿ ಗಾಯತ್ರಿ ಕೊಂಡೆವೂರು ಪ್ರಾರ್ಥನೆ ಹಾಡಿದರು. ರಘುರಾಜ್ ಕುಳೂರು ಸ್ವಾಗತಿಸಿದರು. ದಿನಕರ ಹೊಸಂಗಡಿ ನಿರೂಪಿಸಿದರು. ಮೀನಾಕ್ಷಿ ವಂದಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಕಜಂಪಾಡಿ ಸುಬ್ರಹ್ಮಣ್ಯ ಭಟ್, ಬಿಜೆಪಿ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ.ಕೆ ಶ್ರೀಕಾಂತ್, ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್, ಕಾಸರಗೋಡು ಟಿಇಒ ವೀರೇಂದ್ರ ಕುಮಾರ್, ಸಂಜೀವ ಪುಳಿಕೂರು ಮೊದಲಾದವರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸಮಾಜದ ಸದಸ್ಯರಿಂದ ವಿವಿಧ ಸಾಂಪ್ರದಾಯಕ ನೃತ್ಯ ನಡೆಯಿತು. ಹರೀಶ್ ಶೆಟ್ಟಿ ಮಾಡ ಸ್ವಾಗತಿಸಿ, ಉಮಾನಾಥ್ ವಂದಿಸಿದರು.


Share with

Leave a Reply

Your email address will not be published. Required fields are marked *