ಉಪ್ಪಳ: ಉಪ್ಪಳ ಶ್ರೀ ಅಯ್ಯಪ್ಪ ಮಂದಿರದಲ್ಲಿ 52ನೇ ವರ್ಷದ ಶಬರಿಮಲೆ ಶ್ರೀ ಅಯ್ಯಪ್ಪ ದೀಪೋತ್ಸವದ ಅಂಗವಾಗಿ ಧಾರ್ಮಿಕ ಸಭೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.


ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಆಲುವಾ ತಂತ್ರ ವಿದ್ಯಾಪೀಠದ ಕಾರ್ಯಾಧ್ಯಕ್ಷ ಬ್ರಹ್ಮಶ್ರೀ ಮಲ್ಲಪಳ್ಳಿ ಕೃಷ್ಣನ್ ನಂಬೂದಿರಿ, ನಿವೃತ್ತ ಯೋಧರು, ಕರ್ನಾಟಕ ಸರಕಾರ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ನಿಕ್, ಕ್ಯಾಂಪ್ಕೋ ನಿರ್ಧೇಶಕ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಮಂದಿರದ ಅಧ್ಯಕ್ಷ ಸತೀಶ್ ಶೆಟ್ಟಿ, ಗೌರವಾಧ್ಯಕ್ಷ ಯು.ಎಂ ಭಾಸ್ಕರ, ಗುರುಸ್ವಾಮಿ ಕುಟ್ಟಿಕೃಷ್ಣನ್ ಮೊದಲಾದವರು ಉಪಸ್ಥಿತರಿದ್ದರು.
ಹಲವಾರು ವರ್ಷಗಳ ಕಾಲ ಅಯ್ಯಪ್ಪ ಮಂದಿರದ ಅಭಿವೃದ್ದಿಗಾಗಿ ಅಹರ್ನಿಶಿ ಸೇವೆ ಸಲ್ಲಿಸಿದ ಧಾರ್ಮಿಕ ಮುಂದಾಳು, ಸಮಾಜ ಸೇವಕ ಮಂದಿರದ ಗೌರವಾಧ್ಯಕ್ಷರಾದ ಸೇವಾರತ್ನ ಯು.ಎಂ ಭಾಸ್ಕರರವರನ್ನು ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಮಂದಿರದ ಸಮಿತಿ ವತಿಯಿಂದ ಸ್ವಾಮೀಜಿ ಹಾಗೂ ಗಣ್ಯರು ಶಾಲು ಹೊದಿಸಿ, ಫಲಪುಷ್ಫ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಈ ವೇಳೆ ಕುಟ್ಟಿಕೃಷ್ಣನ್ ಗುರು ಸ್ವಾಮಿಯವರನ್ನು ಸನ್ಮಾನಿಸಲಾಯಿತು. ಇದೇ ವೇದಿಕೆಯಲ್ಲಿ ಕೊಂಡೆವೂರು ಮಠ, ಮಲಯಾಳ ಬಿಲ್ಲವ ಸಂಘ ಐಲ, ಉದ್ಯಾವರ ರಾಜ ಬೆಳ್ಚಪ್ಪಾಡರು ಹಾಗೂ ಬಳಗ, ಯುವಭಾರತಿ ಉಪ್ಪಳ, ರಚನಾ ಸಾಂಸ್ಕೃತಿಕ ಕಲಾ ಸಂಸ್ಥೆ ಉಪ್ಪಳ, ಶಶಿಕಾಂತ್ ಉಪ್ಪಳ ಇವರ ವತಿಯಿಂದಲೂ ಸೇವಾರತ್ನ ಯು.ಎಂ ಭಾಸ್ಕರರವರನ್ನು ಸನ್ಮಾನಿಸಲಾಯಿತು. ಗಂಗಾಧರ ಕೊಂಡೆವೂರು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಕೆ.ಪಿ ನಾಭ ಐಲ ವಂದಿಸಿದರು. ಜಗದೀಶ್ ಪ್ರತಾಪನಗರ ನಿರೂಪಿಸಿದರು.




