ಉಪ್ಪಳ: ದೇರಂಬಳದಲ್ಲಿ ಕಾಲು ಸೇತುವೆ ಕುಸಿದು ಬಿದ್ದು ಹಲವು ತಿಂಗಳು ಕಳೆದರೂ ಮರು ನಿರ್ಮಿಸದಿರುವುದರಿಂದ ಊರವರ ಸಂಚಾರಕ್ಕೆ ಸಮಸ್ಯೆಯಾಗಿದೆ.

ತಾತ್ಕಾಲಿಕವಾಗಿ ಊರವರು ನಿರ್ಮಿಸಿದ ಕಂಗಿನ ಸೇತುವೆಯಿಂದ ಸಂಚಾರ ಭೀತಿಗೆ ಕಾರಣವಾಗುತ್ತಿದೆ. ಮೀಂಜ ಹಾಗೂ ಮಂಗಲ್ಪಾಡಿ ಪಂಚಾಯತ್ ಸಂಗಮಿಸುವ ದೇರಂಬಳದಲ್ಲಿ 2003ರಲ್ಲಿ ಜಿಲ್ಲಾ ಪಂಚಾಯತ್ನಿಂದ ಕಾಲು ಸೇತುವೆಯನ್ನು ನಿರ್ಮಿಸಲಾಗಿತ್ತು.
ಈ ಸೇತುವೆ ಸುಮಾರು 6 ತಿಂಗಳ ಹಿಂದೆ ಮಳೆಗಾಲದ ಸಂದರ್ಭದಲ್ಲಿ ದಿಢೀರನೆ ಕುಸಿದು ಬಿದ್ದಿದೆ. ಈ ವೇಳೆ ಜನರ ಸಂಚಾರ ಇಲ್ಲದಿರುವುದರಿಂದ ಭಾರೀ ದುರಂತ ತಪ್ಪಿಹೋಗಿರುವುದಾಗಿ ಸ್ಥಳಿಯರು ತಿಳಿಸಿದ್ದಾರೆ.
ಸಂಕ ಮರು ನಿರ್ಮಾಣಕ್ಕೆ ಒತ್ತಾಯಿಸಿದ್ದರೂ ಇಂದಿಗೆ ಹಲವು ತಿಂಗಳು ಕಳೆದರೂ ಸೇತುವೆ ಮರು ನಿರ್ಮಾಣಕ್ಕೆ ಕ್ರಮಯಿಲ್ಲದಿರುವುದು ಊರವರನ್ನು ಸಮಸ್ಯೆಗೆ ಸಿಲುಕಿಸಿದೆ. ಊರವರು ತಾತ್ಕಾಲಿಕವಾಗಿ ಕಂಗಿನಿಂದ ನಿರ್ಮಿಸಿದ ಸೇತುವೆಯ ಮೂಲಕ ಇದೀಗ ಸಂಚರಿಸುತ್ತಿರುವುದು ಅಪಾಯಕಾರಿಯಾಗಿದೆ.
ಇತ್ತೀಚೆಗೆ ಮಹಿಳೆಯೋರ್ವರು ಆಯತಪ್ಪಿ ಬಿದ್ದಿರುವುದಾಗಿ ಹೇಳಲಾಗುತ್ತಿದೆ. ಮೀಂಜ ಪಂಚಾಯತ್ನ ದೇರಂಬಳ ನಿವಾಸಿಗಳಿಗೆ ಜೋಡುಕಲ್ಲುಹಾಗೂ ಬೇಕೂರು ಸರಕಾರಿ ಶಾಲೆಗೆ ಹತ್ತಿರ ದಾರಿಯಾಗಿದ್ದು, ಶಾಲಾ ಮಕ್ಕಳ ಸಹಿತ ಕೆಲಸಗಳಿಗೆ, ಅಂಗಡಿಗಳಿಗೆ ತೆರಳುತ್ತಿದ್ದಾರೆ. ಹಾಗೆಯೇ ಜೋಡುಕಲ್ಲು, ಮಡಂದೂರು ಸಹಿತ ಪರಿಸರ ನಿವಾಸಿಗಳಿಗೆ ಚಿಗುರುಪಾದೆ, ಮೀಯಪದವು ಪ್ರದೇಶಕ್ಕೂ ಹತ್ತಿರವಾಗಿದೆ. ಹೆಚ್ಚಿನ ಜನರು ಈ ಕಾಲು ಸೇತುವೆಯನ್ನೇ ಆಶ್ರಯಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸೇತುವೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕೆಂದು ಊರವರು ಒತ್ತಾಯಿಸಿದ್ದಾರೆ.