ಮುಳ್ಳೇರಿಯ: ಮನೆಯೊಳಗೆ ಪತ್ತೆಯಾದ ಹಾವಿನ ದೇಹದಲ್ಲಿ ಚಿನ್ನದ ಉಂಗುರ ಕ೦ಡುಬ೦ದಿದ್ದು ಇದು ಆಶ್ಚರ್ಯಕ್ಕೆ ಕಾರಣವಾಗಿದೆ.

ಅಡೂರು ಪದಿಕ್ಕಾಲ್ ನಿವಾಸಿ ರವಿ ಎಂಬವರ ಮನೆಯೊಳಗೆ ನಿನ್ನೆ ಬೆಳಿಗ್ಗೆ ಹಾವು ಕಂಡುಬಂದಿತ್ತು. ಮರದಿಂದ ತಯಾರಿಸಿದ ಮೇಜಿನೊಳಗೆ ಹಾವು ಅವಿತುಕೊಂಡಿತ್ತೆನ್ನ ಲಾಗಿದೆ. ಮಕ್ಕಳು ಮೇಜು ತೆರೆಯಲೆತ್ನಿಸಿದಾಗ ಹಾವು ಕಂಡುಬಂದಿದ್ದು, ಈ ಬಗ್ಗೆ ಮಕ್ಕಳು ಹಿರಿಯರಿಗೆ ತಿಳಿಸಿದ್ದಾರೆ. ಅದು ನಾಗರಹಾವಾಗಿ ರಬಹುದೇ ಎಂದು ಭಯಗೊಂಡ ಮನೆಯವರು ಕೂಡಲೇ ಫಾರೆಸ್ಟರ್ ಕೃಷ್ಣನ್ ಎಂಬವರಿಗೆ ವಿಷಯ ತಿಳಿಸಿದ್ದಾರೆ. ಕೃಷ್ಣನ್ ಸ್ಥಳಕ್ಕೆ ತಲುಪಿ ಪರಿಶೀಲಿಸಿದಾಗ ಹಾವು ಕಂಡುಬಂದಿದ್ದು, ಅವರು ರೆಸ್ಟೋವರ್ಗಳಾದ ಪಾಂಡಿಯ ಅನಿಲ್ ಹಾಗೂ ಏವಂದೂರಿನ ಮಹೇಶ್ ಎಂಬಿವರಿಗೆ ಮಾಹಿತಿ ನೀಡಿದರು. ಅವರಿಬ್ಬರು ಸ್ಥಳಕ್ಕೆ ತಲುಪಿ ಮೇಜು ತೆರೆದು ನೋಡಿದಾಗ ಅದರೊಳಗೆ ಹಾವು ಇರುವುದು ಕಾಣಿಸಿದೆ. ಕೂಲಂಕುಷವಾಗಿ ಪರಿಶೀಲಿಸಿ ದಾಗ ಅದು ಕೇರೆ ಹಾವಾಗಿದೆಯೆಂದು ಖಚಿತಪಡಿಸ ಲಾಯಿತು. ಮಾತ್ರವಲ್ಲದೆ ಹಾವಿನ ದೇಹದಲ್ಲಿ ಚಿನ್ನದ ದೊಡ್ಡ ಉಂಗುರವೊಂದು ಸಿಲುಕಿಕೊಂಡಿರುವುದು ಕಾಣಿಸಿದೆ. ದೇಹದಲ್ಲಿ ಉಂಗುರ ಸಿಲುಕಿಕೊಂಡಿ ರುವುದರಿಂದ ಹಾವು ತೀವ್ರ ಅಸ್ವಸ್ಥ ಸ್ಥಿತಿಯಲ್ಲಿತ್ತು. ಅನಂತರ ಹಾವನ್ನು ಮೇಜಿನೊಳಗಿನಿಂದ ಹೊರಕ್ಕೆ ತೆಗೆದು ಉಂಗುರವನ್ನು ತುಂಡರಿಸಿ ಬೇರ್ಪಡಿಸಲಾಯಿತು. ನಂತರ ಹಾವನ್ನು ಕಾಡಿಗೆ ಬಿಡಲಾಯಿತು. ಹಾವಿನ ದೇಹದಲ್ಲಿ ಚಿನ್ನದ ಉಂಗುರ ಹೇಗೆ ಸಿಲುಕಿಕೊಂಡಿದೆ ಎಂದು ತಿಳಿದುಬಂದಿಲ್ಲ. ಇಂತಹ ಘಟನೆ ಮೊಟ್ಟಮೊದಲಾಗಿದೆಯೆಂದು ಫಾರೆಸ್ಟರ್ ಕೃಷ್ಣನ್ ತಿಳಿಸಿದ್ದಾರೆ.




