ನವದೆಹಲಿ: ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾದ ಟಾಟಾ ಒಡೆತನದ ಏರ್ ಇಂಡಿಯಾ, ಜೆಟ್ ಇಂಧನ ಬೆಲೆ ಏರಿಕೆ ಮತ್ತು ನಿರ್ಬಂಧಿತ ವಾಯುಪ್ರದೇಶದ ಕಾರಣದಿಂದ ಮೇ ತಿಂಗಳಿನಿಂದ ಜುಲೈವರೆಗೆ ತನ್ನ ಅಂತಾರಾಷ್ಟ್ರೀಯ ವಿಮಾನಗಳ ಸಂಖ್ಯೆಯನ್ನು ಕಡಿತಗೊಳಿಸಲು ನಿರ್ಧರಿಸಿದೆ.

ಪಶ್ಚಿಮ ಏಷ್ಯಾ ಸಂಘರ್ಷದ ಕಾರಣದಿಂದ ಉಂಟಾದ ವಾಯುಪ್ರದೇಶ ನಿರ್ಬಂಧದಿಂದಾಗಿ ವಿವಿಧ ದೇಶಗಳಿಗೆ ಪ್ರಯಾಣ ದೀರ್ಘವಾಗುತ್ತಿದೆ. ಇದರ ಪರಿಣಾಮ ಇಂಧನ ದಹನ ಕೂಡ ಹೆಚ್ಚಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಏರ್ ಇಂಡಿಯಾ ಸಂಸ್ಥೆ ₹22 ಸಾವಿರ ಕೋಟಿಗೂ ಹೆಚ್ಚು ನಷ್ಟ ಅನುಭವಿಸಿದೆ. ಏರ್ಲೈನ್ನ ಹಲವು ಅಂತಾರಾಷ್ಟ್ರೀಯ ವಿಮಾನಗಳು ಲಾಭದಾಯಕವಾಗಿಲ್ಲ, ಕಾರ್ಯಾಚರಣೆ ಮುಂದುವರಿಸುವುದರಿಂದ ನಷ್ಟ ಮತ್ತಷ್ಟು ಹೆಚ್ಚಾಗಲಿದೆ ಎಂದು ಏರ್ ಇಂಡಿಯಾದ ನಿರ್ಗಮಿತ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಕ್ಯಾಂಪ್ಬೆಲ್ ವಿಲ್ಸನ್ ತಿಳಿಸಿದ್ದಾರೆ. ವಿಲ್ಸನ್ ಈ ವರ್ಷದ ಕೊನೆಯಲ್ಲಿ ಹುದ್ದೆಯಿಂದ ಕೆಳಕ್ಕಿಳಿಯುವುದಾಗಿ ಈಗಾಗಲೇ ಘೋಷಿಸಿದ್ದಾರೆ.
ಅಧಿಕ ನಿರ್ವಹಣೆ ವೆಚ್ಚ ಆರ್ಥಿಕ ಹೊರೆ:
‘ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿಮಾನ ಇಂಧನದ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಇದು ಸಂಸ್ಥೆಯ ಒಟ್ಟು ನಿರ್ವಹಣಾ ವೆಚ್ಚದ ಶೇ.30-40ರಷ್ಟಿರುವುದರಿಂದ, ವಿಮಾನಯಾನ ಸಂಸ್ಥೆಗೆ ಆರ್ಥಿಕ ಹೊರೆಯಾಗಿದೆ. ಹೀಗಾಗಿ ಸವಾಲಿನ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಜೂನ್ ಮತ್ತು ಜುಲೈ ತಿಂಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿ ವಿಮಾನ ಹಾರಾಟ ಕಡಿಮೆ ಮಾಡುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ’ ಎಂದು ಕ್ಯಾಂಪ್ಬೆಲ್ ವಿಲ್ಸನ್ ಹೇಳಿದ್ದಾರೆ.
ಇಂಧನ ಬೆಲೆಗಳು ಸ್ಥಿರವಾದ ನಂತರ ಮತ್ತು ವಾಯುಪ್ರದೇಶಗಳ ಮೇಲಿನ ನಿರ್ಬಂಧ ತೆರವಾದ ಬಳಿಕ ವಿಮಾನಯಾನ ಸಂಸ್ಥೆಯು ಕಾರ್ಯಾಚರಣೆಯನ್ನು ಮುಂದುವರಿಸುವ ಗುರಿ ಹೊಂದಿದೆ. ದೇಶಿಯವಾಗಿಯೂ ನೂರು ವಿಮಾನಗಳ ಹಾರಾಟ ಕಡಿತಗೊಳಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.
ಪ್ರತಿನಿತ್ಯ 1 ಸಾವಿರಕ್ಕೂ ಹೆಚ್ಚು ಏರ್ ಇಂಡಿಯಾ ವಿಮಾನಗಳು ಅಂತಾರಾಷ್ಟ್ರೀಯ ಹಾರಾಟ ನಡೆಸುತ್ತವೆ. ಅವುಗಳಲ್ಲಿ ಜೂನ್ನಲ್ಲಿ ಯುರೋಪ್, ಉತ್ತರ ಅಮೆರಿಕ, ಆಸ್ಟ್ರೇಲಿಯಾ ಮತ್ತು ಸಿಂಗಾಪುರಕ್ಕೆ ಕಾರ್ಯಾಚರಣೆಯ ಕಡಿತಗೊಳಿಸಲಾಗುವುದು ಎಂದು ವಿಮಾನಯಾನ ಸಂಸ್ಥೆ ಹೇಳಿದೆ.




