ಕಾಸರಗೋಡು: ತಿರುವನಂತಪುರಂ ಕಾರ್ಪೊರೇಷನ್ ಮೇಯರ್, ಡೆಪ್ಯೂಟಿ ಮೇಯರ್ ಸೇರಿದಂತೆ ಬಿಜೆಪಿ ಕೌನ್ಸಿಲರ್ಗಳ ಮೇಲೆ ಸಿಪಿಎಂ ನಡೆಸಿದ ಹಿಂಸಾಚಾರವನ್ನು ಖಂಡಿಸಿ, ಬಿಜೆಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕಾಸರಗೋಡು ನಗರದಲ್ಲಿ ಪ್ರತಿಭಟನೆ ಹಾಗೂ ಧರಣಿ ನಡೆಸಲಾಯಿತು. ಬಿಜೆಪಿ ಜಿಲ್ಲಾ ಅಧ್ಯಕ್ಷ ಅಶ್ವಿನಿ ಎಂಎಲ್ ಪ್ರತಿಭಟನೆಯನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಶ್ವಿನಿ ಎಂಎಲ್, “ಸಿಪಿಎಂಗೆ ರಾಜ್ಯದ ಆಡಳಿತ ಕಳೆದುಕೊಂಡದ್ದಕ್ಕಿಂತಲೂ ಹೆಚ್ಚು ಆತಂಕ ಮತ್ತು ಅಸ್ವಸ್ಥತೆ ತಿರುವನಂತಪುರಂ ಕಾರ್ಪೊರೇಷನ್ನ ಆಡಳಿತ ಕಳೆದುಕೊಂಡಿರುವುದರಿಂದ ಉಂಟಾಗಿದೆ. ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ ಕ್ರಮ ಹಾಗೂ ಮೇಯರ್ ಕಚೇರಿಯ ಕಾರ್ಯವೈಖರಿಯನ್ನು ಹೆಚ್ಚು ಜನಸ್ನೇಹಿಯಾಗಿಸಿದ ಕಾರಣ ಸಿಪಿಎಂ ಅಸಹನೀಯಗೊಂಡಿದೆ. ಬಿಜೆಪಿ ಆಡಳಿತಕ್ಕೆ ಬಂದಿರುವ ಸ್ಥಳಗಳಲ್ಲಿ ಸಿಪಿಎಂಗೆ ಮತ್ತೆ ಅಧಿಕಾರಕ್ಕೆ ಬರುವ ಅವಕಾಶ ಇಲ್ಲ ಎಂಬ ಅರಿವೇ ಈ ಹಿಂಸಾಚಾರಕ್ಕೆ ಕಾರಣವಾಗಿದೆ” ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮನುಲಾಲ್ ಮೇಲತ್, ಎನ್. ಬಾಬುರಾಜ್, ಪಿ.ಆರ್. ಸುನಿಲ್, ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಶೈಬು, ಜಿಲ್ಲಾ ಸೆಲ್ ಸಂಯೋಜಕ ಸುಕುಮಾರ್ ಕುದ್ರೆಪ್ಪಾಡಿ, ಒಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಕುಲಾಲ್, ಜಿಲ್ಲಾ ಉಪಾಧ್ಯಕ್ಷ ಟಿ.ವಿ. ಮುರಳಿ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿತಾ ನಾಯಕ್ ಸೇರಿದಂತೆ ಹಲವು ಹಿರಿಯ ನಾಯಕರು ಪ್ರತಿಭಟನೆಗೆ ನೇತೃತ್ವ ನೀಡಿದರು.




