ನುಹ್ (ಹರಿಯಾಣ): ಮಣ್ಣಿನಡಿ ಮೂರು ದಿನಗಳ ಕಾಲ ಹೂತುಹಾಕುವ ಪ್ರದರ್ಶನದ ವೇಳೆ ಉಸಿರುಗಟ್ಟಿ 27 ವರ್ಷದ ಸರ್ಕಸ್ ಕಲಾವಿದ ಮೃತಪಟ್ಟಿರುವ ಘಟನೆ ಹರಿಯಾಣದ ನುಹ್ ಜಿಲ್ಲೆಯಲ್ಲಿ ನಡೆದಿದೆ. ಹಲವು ಬಾರಿ ಯಶಸ್ವಿಯಾಗಿ ಪ್ರದರ್ಶಿಸಿದ್ದ ‘ಜೀವಂತ ಸಮಾಧಿ’ ಸಾಹಸ ಈ ಬಾರಿ ಪ್ರಾಣಾಂತಿಕವಾಗಿ ಪರಿಣಮಿಸಿದೆ.

ಮೃತನನ್ನು ಫರಿದಾಬಾದ್ನ ಗೌಂಚಿ ಗ್ರಾಮದ ನಿವಾಸಿ ದೀಪಕ್ ಎಂದು ಗುರುತಿಸಲಾಗಿದೆ. ಸಾಂಪ್ರದಾಯಿಕ ಗ್ರಾಮೀಣ ಸರ್ಕಸ್ ತಂಡದ ಸದಸ್ಯನಾಗಿದ್ದು, ಚೀಲದೊಳಗೆ ಕುಳಿತು ಗುಂಡಿಯೊಳಗೆ ಇಳಿದು, ಅದರ ಮೇಲೆ ಮಣ್ಣು ಮುಚ್ಚಿ ಮೂರು ದಿನಗಳ ಬಳಿಕ ಜೀವಂತವಾಗಿ ಹೊರಬರುವ “ಲೈವ್ ಸಮಾಧಿ” ಸಾಹಸ ಪ್ರದರ್ಶನವನ್ನು ಹಲವು ಬಾರಿ ಯಶಸ್ವಿಯಾಗಿ ನಡೆಸಿದ್ದ ಆದರೆ ಈ ಬಾರಿ ಪ್ರದರ್ಶನದ ವೇಳೆ ದೀಪಕ್ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ, ಸಹ ಕಲಾವಿದರು ಮಣ್ಣನ್ನು ತೆರವುಗೊಳಿಸಿ ಹೊರತೆಗೆದರು. ತತ್ ಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದರು.
ತನಿಖೆಯಲ್ಲಿ, ಜುಲೈ 23ರಂದು ದೀಪಕ್ ಗುಂಡಿಯೊಳಗೆ ಇಳಿದಿದ್ದ ವೇಳೆ ಉಸಿರುಗಟ್ಟಿದ ಪರಿಣಾಮ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಾವಿಗೆ ಕಾರಣವಾದ ನಿಖರ ಸಂದರ್ಭಗಳ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.




