ಇಂದು ಬೆಳೆಯುತ್ತಿರುವ ನಗರೀಕರಣ ಮತ್ತು ಸೀಮಿತ ಸ್ಥಳಾವಕಾಶದ ನಡುವೆ, ಲಭ್ಯವಿರುವ ಜಾಗವನ್ನು ಅತ್ಯಂತ ಪರಿಣಾಮಕಾರಿಯಾಗಿ ಮತ್ತು ಪರಿಸರ ಸ್ನೇಹಿಯಾಗಿ ಬಳಸುವ ಕೌಶಲ ಅತ್ಯಗತ್ಯವಾಗಿದೆ. ಆದ್ದರಿಂದ, ಬದಲಾಗುತ್ತಿರುವ ಜೀವನಶೈಲಿಗೆ ತಕ್ಕಂತೆ ಸುರಕ್ಷಿತ, ಸುಸ್ಥಿರ ಮತ್ತು ಅರ್ಥಪೂರ್ಣವಾದ ವಾಸಸ್ಥಳಗಳನ್ನು ರೂಪಿಸುವ ವೃತ್ತಿಪರ ನೈಪುಣ್ಯತೆಯನ್ನು ಪಡೆಯಲು ‘ಇಂಟೀರಿಯರ್ ಡಿಸೈನ್’ ಕೋರ್ಸ್ ಮಾಡುವುದು ಇಂದಿನ ಕಾಲದಲ್ಲಿ ಅತ್ಯಂತ ಪ್ರಮುಖವಾಗಿದೆ.
ಇಂತಹ ವಿದ್ಯಾರ್ಥಿಗಳ ಕಲ್ಪನಾ ವಿನ್ಯಾಸ ಮತ್ತು ಸೃಜನಶೀಲತೆಯನ್ನು ಎಲ್ಲರ ಮುಂದೆ ಪ್ರದರ್ಶಿಸಲು ಒಂದು ಅತ್ಯುತ್ತಮ ದೃಶ್ಯ ವೇದಿಕೆಯಾಗಿ ಭಿತ್ತಿ ಪತ್ರಿಕೆಯು ಸಹಕರಿಸುತ್ತದೆ.
ಈ ನಿಮಿತ್ತ ಅಕ್ಷಯ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ನ ಅಧೀನದಲ್ಲಿರುವ ಅಕ್ಷಯ ಕಾಲೇಜಿನ ಇಂಟೀರಿಯರ್ ಡಿಸೈನ್ ಅಂಡ್ ಡೆಕೋರೇಷನ್ ವಿಭಾಗದ ಬಿತ್ತಿ ಪತ್ರಿಕೆ ಉದ್ಘಾಟನೆ ಎಲೈಟ್ ಅಸೋಸಿಯೇಷನ್ ಹಾಗೂ ಐಕ್ಯೂ ಎಸಿ ಎಸೋಸಿಯೇಷನ್ ವತಿಯಿಂದ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿ ‘ಆಟಿಲಿಯರ್’ ಬಿತ್ತಿ ಪತ್ರಿಕೆ ಉದ್ಘಾಟನೆ ಮಾಡಿದ ಆರ್ಕಿಟೆಕ್ಟ್ ರಾಮ್ ಪ್ರಕಾಶ್ ಇವರು ಒಳಾಂಗಣ ವಿನ್ಯಾಸವು ಕೇವಲ ತಾಂತ್ರಿಕ ಕೌಶಲ್ಯವಲ್ಲ, ಅದು ಬಹುಮುಖಿ ಕಲೆಯ ಮಿಶ್ರಣವೂ ಆಗಿದೆ, ಈ ಕಲೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಕೆ ಪಕ್ಕಳ ಇವರು ಹೀಗೆಯೇ ಅನೇಕ ಉತ್ತಮ ರೀತಿಯ ಲೇಖನಗಳು ಬರುತ್ತಿರಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಅರ್ಪಿತ್ ಟಿಎ, ಎಲೈಟ್ ಎಸೋಸಿಯೇಷನ್ ಸಂಯೋಜಕಿ ಹಾಗೂ ವಿದ್ಯಾರ್ಥಿ ಪದಾಧಿಕಾರಿಗಳು ಹಾಜರಿದ್ದರು. ಇಂಟೀರಿಯರ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮ ನಡೆಸಿಕೊಟ್ಟರು.





