ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ತನ್ನೊಂದಿಗೆ ಸಹಜೀವನ ನಡೆಸುತ್ತಿದ್ದ ಪ್ರೇಯಸಿಯ ಐದೂವರೆ ವರ್ಷದ ಬಾಲಕಿಯನ್ನು ಹತ್ಯೆಗೈದ ರಿಯಲ್ ಎಸ್ಟೇಟ್ ಏಜೆಂಟ್ನನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಈ ಮೂಲಕ 3 ತಿಂಗಳ ಹಿಂದೆ ನಡೆದಿದ್ದ ಬಾಲಕಿ ವೆನ್ನಿಲ್ಲಾ ಎಂಬಾಕೆಯ ಕೊಲೆ ಪ್ರಕರಣದ ರಹಸ್ಯ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ದಾವಣಗೆರೆ ಮೂಲದ ಮೋಹನ್ ಜಿ. ಮಹಾಲಿಂಗಪ್ಪ (40) ಬಂಧಿತ ಆರೋಪಿ. ಕೃತ್ಯ ಸಹಕಾರ ನೀಡಿದ್ದಾಳೆ ಎನ್ನಲಾದ ಈತನ ಪ್ರೇಯಸಿ, ವೆನ್ನೆಲ್ಲಾ ತಾಯಿ ಪ್ರಿಯಾಂಕಾ (40) ಎಂಬಾಕೆ ತಲೆಮರೆಸಿಕೊಂಡಿದ್ದು, ಆಕೆಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಮಾರ್ಚ್ 24ರಂದು ಪ್ರಿಯಾಂಕಾ, ತನ್ನ ಪ್ರಿಯಕರ ಮೋಹನ್ ಜತೆ ಸೇರಿ ತನ್ನ ಐದೂವರೆ ವರ್ಷದ ವೆನ್ನಿಲ್ಲಾ ಎಂಬ ಪುತ್ರಿಯನ್ನು ಹತ್ಯೆಗೈದಿದ್ದಳು. ಈ ಸಂಬಂಧ ಮೊದಲಿಗೆ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಮರಣೋತ್ತರ ಪರೀಕ್ಷಾ ವರದಿ ಹಾಗೂ ಇತರ ಸಾಕ್ಷ್ಯಾಗಳ ಆಧರಿಸಿ ಬಾಲಕಿಯ ತಂದೆ ಪ್ರವೀಣ್ನಿಂದ ದೂರು ಪಡೆದು ಕೊಲೆ ಪ್ರಕರಣ ದಾಖಲಿಸಿ ಆರೋಪಿ ಬಂಧಿಸಿದ್ದಾರೆ. ದಾವಣಗೆರೆಯ ಹರಿಹರದ ಪ್ರವೀಣ್, ಸ್ವಂತ ಊರಿನಲ್ಲಿ ಶಾಲೆಯೊಂದು ಪ್ರಾರಂಭಿಸಿ ಅಲ್ಲಿಯೇ ಶಿಕ್ಷಕರಾಗಿದ್ದಾರೆ.
2007ರಲ್ಲಿ ವಕೀಲೆಯಾಗಿ ರುವ ಪ್ರಿಯಾಂಕಾಳನ್ನು ಮದುವೆಯಾಗಿದ್ದು ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ಈ ಪೈಕಿ ವೆನ್ನಿಲ್ಲಾ 2ನೇ ಪುತ್ರಿ. ಪ್ರಿಯಾಂಕಾ ಮದುವೆಯಾದ ದಿನದಿಂದಲೇ ಐಷಾರಾಮಿ ಜೀವನ ಬಯಸುತ್ತಿದ್ದಳು. ಈ ಮಧ್ಯೆ ಈಕೆಯ ಕುಟುಂಬಕ್ಕೆ ಸೇರಿ 50 ಎಕರೆ ಜಮೀನಿನ ಪೈಕಿ 25 ಎಕರೆ ಜಮೀನು ವ್ಯಾಜ್ಯದಲ್ಲಿದ್ದು, ಅದರ ನಿರ್ವಹಣೆಗಾಗಿ 2025ರಲ್ಲಿ ಬೆಂಗಳೂರಿಗೆ ಬಂದಿದ್ದಾಳೆ.




