ಮದುವೆ ಸಮಾರಂಭಗಳಲ್ಲಿ ಮದ್ಯಪಾನ ನಿಷೇಧಿಸುವಂತೆ ಪತ್ರ ಹಂಚುವ ಮೂಲಕ‌ ಜನಜಾಗೃತಿ‌

Share with

ಮಂಗಳೂರು: ಮದುವೆ ಎಂದರೆ ಸಹಜವಾಗಿ ವಧು ವರರ ಪಾಲಿಗೆ ವಿಶೇಷವಾದ ದಿನವಾಗಿದ್ದು, ವಧು ವರರ ಪಾಲಿಗೆ ಪ್ರತಿ ಕ್ಷಣಗಳು ಕೂಡ ಅವಿಸ್ಮರಣೀಯ ಆನಂದವನ್ನು ಉಂಟು ಮಾಡುತ್ತವೆ. ಇದೀಗ, ಹದಿಹರೆಯದ ಯುವಜನತೆಗೆ ದುಶ್ಚಟಗಳಿಗೆ ಬೀಳದಂತೆ ತಪ್ಪಿಸುವ ಉದ್ದೇಶದಿಂದ ಕಲ್ಲಡ್ಕ ವಲಯದ ಸದಸ್ಯರು ಪ್ರಗತಿಗಾಗಿ ಜನಜಾಗೃತಿ ಎಂಬ ಹೆಸರಲ್ಲಿ ಕರಪತ್ರವೊಂದನ್ನು ಸಿದ್ಧಪಡಿಸಿದ್ದಾರೆ.

ಮದ್ಯಪಾನ ನಿಷೇಧಿ

ತುಳುನಾಡಿನಲ್ಲಿ ಹಿಂದು ಸಂಸ್ಕೃತಿಗೆ ವಿಶೇಷ ಮಹತ್ವ ನೀಡಲಾಗುತ್ತದೆ. ಕರಾವಳಿ ಜಿಲ್ಲೆಗಳಲ್ಲಿ ಮತ್ತು ತುಳುನಾಡಿನಲ್ಲಿ ವಿಶಿಷ್ಟ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಗಳಿಗೆ ವಿಶೇಷ ಮಹತ್ವ ನೀಡಲಾಗುತ್ತದೆ. ಮದುವೆ, ನಿಶ್ಚಿತಾರ್ಥ ತೊಡಮನೆ, ಸೀಮಂತ, ಮದರಂಗಿ, ಹುಟ್ಟುಹಬ್ಬ ಎಲ್ಲ ಆಚರಣೆಗಳನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಆಚರಣೆಗಳು ಹಾದಿ ತಪ್ಪುತ್ತಿದ್ದಾರೆ. ಕೇವಲ ಮದ್ಯಪಾನ, ಧೂಮಪಾನ ಇತ್ಯಾದಿ ಕೆಟ್ಟ ಚಟಗಳಿಗೆ ಕಾರ್ಯಕ್ರಮಗಳನ್ನು ಸಂಘಟಿಸಲಾಗುತ್ತಿದೆ.

ಇತ್ತೀಚಿಗೆ ಮದರಂಗಿಯಂಥ ಕಾರ್ಯಕ್ರಮಗಳಲ್ಲಿ ಡ್ರಮ್ ಗಳಲ್ಲಿ ತುಂಬಿಸಿಡುವ ಅಮಲು ತುಂಬಿದ ಬಾಟಲಿಗಳು ನಶೆ ಏರಿಸಲು ಕಾರಣವಾಗುತ್ತವೆ. ಜೋರು ಧ್ವನಿಯ ಡಿಜೆಗಳಿಗೆ ಆಕರ್ಷಿತರಾಗುವ ಯುವ ಜನತೆ ಕುಡಿದ ಮತ್ತಿನಲ್ಲಿ ತಮ್ಮ ಜೀವವನ್ನು ಅಪಾಯಕ್ಕೆ ಆಹ್ವಾನ ಮಾಡಿಕೊಂಡು ಬಲಿ ಕೊಡುವುದನ್ನು ತಪ್ಪಿಸಲು ಎಚ್ಚರಿಕೆ ವಹಿಸಬೇಕು. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮದ್ಯಪಾನ ವಿರೋಧಿ ಜಾಗೃತಿಗೆ ದೊಡ್ಡ ಮಟ್ಟದ ಖ್ಯಾತಿ ಪಡೆದಿದೆ. ಇದರ ಕಲ್ಲಡ್ಕ ವಲಯದ ಸದಸ್ಯರು ಪ್ರಗತಿಗಾಗಿ ಜನಜಾಗೃತಿ ಎಂಬ ಹೆಸರಲ್ಲಿ ಕರಪತ್ರವೊಂದನ್ನು ಸಿದ್ಧಪಡಿಸಿದ್ದಾರೆ.

ಶೌರ್ಯ ವಿಪತ್ತು ನಿರ್ವಹಣಾ ಬಳಗ ಜೊತೆಗೂಡಿ ವಲಯದ ಮನೆಗಳಲ್ಲಿ ಮದುವೆ ಸಮಾರಂಭ ನಿಶ್ಚಯವಾಗುವುದು ಗೊತ್ತಾದ ಬಳಿಕ ಮನೆಯವರಿಗೆ ಕರಪತ್ರ ನೀಡುವುದರ ಜೊತೆಗೆ ಇದರ ಉದ್ದೇಶಗಳನ್ನು ಮನದಟ್ಟು ಮಾಡುವ ಕಾರ್ಯವನ್ನು ಮಾಡುತ್ತಿದೆ. ತಾಲೂಕಿನಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಮಾಡಲಾಗುತ್ತಿದ್ದು, ಕಲ್ಲಡ್ಕ ವಲಯದ ಜನಜಾಗೃತಿ ವೇದಿಕೆ ಮುಂಚೂಣಿಯಲ್ಲಿದೆ.

ಕೇವಲ ಮಧ್ಯಪಾನ ಧೂಮಪಾನ ಇತ್ಯಾದಿ ಕೆಟ್ಟ ಚಟುವಟಿಕೆಗಳಿಗೆ ಆಸ್ಪದ ನೀಡಿ ಕಾರ್ಯಕ್ರಮಗಳನ್ನು ಸಂಘಟಿಸುವುದನ್ನು ತಡೆಗಟ್ಟಲು ಶುಭ ಕಾರ್ಯಕ್ರಮಗಳು ದಿನ ನಿಗದಿಯಾದ ಮನೆಗಳಿಗೆ ಯೋಜನೆಯ ಪದಾಧಿಕಾರಿಗಳು ಸದಸ್ಯರುಗಳು ಭೇಟಿ ನೀಡಿ ದುಶ್ಚಟ ಕಾರ್ಯಕ್ರಮಗಳನ್ನು ನಿಲ್ಲಿಸುವಂತೆ ಮನವೊಲಿಸಿ ಮನವಿ ಪತ್ರವನ್ನು ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ.

” ಯಾವುದೇ ಕಾರಣಕ್ಕೂ ಈ ವಿಷಯದಲ್ಲಿ ರಾಜಿ ಮಾಡಿಕೊಳ್ಳಬಾರದು. ನನ್ನ ಮನೆಯಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳಲ್ಲಿ ಅಮಲು ಸೇವನೆಗೆ ಅವಕಾಶ ನೀಡುವುದಿಲ್ಲ ಎಂಬ ದಿಟ್ಟ ನಿರ್ಧಾರದ ಪ್ರತಿಜ್ಞೆ ಕೈಗೊಳ್ಳುವ ಅನಿವಾರ್ಯತೆಯಿದೆ. ಈ ಅಭಿಯಾನವನ್ನು ನಮ್ಮ ಮನೆಯಿಂದಲೇ ಆರಂಭಿಸೋಣ. ಪ್ರಗತಿಗಾಗಿ ಜನಜಾಗೃತಿ ಎಂದು ಕರಪತ್ರದಲ್ಲಿ ನಮೂದಿಸಲಾಗಿದೆ” ಈ ಯೋಜನೆಯ ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣಶೆಟ್ಟಿ, ಜನಜಾಗ್ರತಿ ವೇದಿಕೆ ಕಲ್ಲಡ್ಕ ವಲಯ ಅಧ್ಯಕ್ಷ ಬಟ್ಯಪ್ಪ ಶೆಟ್ಟಿ ನೇತೃತ್ವದಲ್ಲಿ ಈ ಕಾರ್ಯ ಕಲ್ಲಡ್ಕ ವಲಯದಾದ್ಯಂತ ನಡೆಯುತ್ತಿದೆ.


Share with

Leave a Reply

Your email address will not be published. Required fields are marked *