
ಬಂಟ್ವಾಳ: ತಾಲೂಕಿನ ಕಾವಳಪಡೂರು ಗ್ರಾಮದ ಕಲ್ಕರ ಬೆಟ್ಟು ತರವಾಡು ಮನೆಯಲ್ಲಿ ವಾರ್ಷಿಕ ದೈವ ದೇವರುಗಳ ಉತ್ಸವ ಹಾಗೂ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಧೂಮಾವತಿ ದೈವ ಹಾಗೂ ಕೊರಗಜ್ಜ ಮತ್ತು ಮಯೊಂತಿ ದೈವಗಳ ದೈವಸ್ಥಾನಕ್ಕೆ ಶಿಲಾನ್ಯಾಸ ಕಾರ್ಯವು ನಡೆಯಿತು.

ನಾರಾಯಣ ಶಿಬರಾಯರ ನೇತೃತ್ವದಲ್ಲಿ ನಡೆದ ಶಿಲಾನ್ಯಾಸ ಕಾರ್ಯದಲ್ಲಿ ಶ್ರೀ ಕ್ಷೇತ್ರ ಕಾರಿಂಜೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಚಂದ್ರಶೇಖರ ಪುಳಿಮಜಲು, ಕರುಣಾಕರ ಪೂಜಾರಿ ಮದ್ವ, ಕಾವಳಪಡೂರು ಗ್ರಾಮ ಪಂಚಾಯಿತಿ ಸದಸ್ಯರು, ಕಲ್ಕರ ಬೆಟ್ಟು ಗುಜರನ್ ಕುಟುಂಬಸ್ಥರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಕಾರಿಂಜೇಶ್ವರ ದೇವಸ್ಥಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ರಥಕ್ಕೆ ಕಲ್ಕರಬೆಟ್ಟು ಗುಜರನ್ ಕುಟುಂಬಸ್ಥರಿಂದ ಸಂಗ್ರಹವಾದ 26,432 ರೂಪಾಯಿಯನ್ನು ಶ್ರೀ ಕ್ಷೇತ್ರ ಕಾರಿಂಜ ದೇವಸ್ಥಾನಕ್ಕೆ ಸಮರ್ಪಣೆಯನ್ನು ಮಾಡಿದರು. ತದನಂತರ ತರವಾಡು ಮನೆಯಲ್ಲಿ ನಾಗತಂಬಿಲ ಶ್ರೀದೇವಿಯ ಮಹಾಪೂಜೆ, ದೈವಗಳಿಗೆ ಪರ್ವರಾಧನೆ ತಿರುಪತಿ ವೆಂಕಟರಮಣ ದೇವರಿಗೆ ಕಾಣಿಕೆ ಸಮರ್ಪಣೆ ಹಾಗೂ ಸಂಜೆ ದೈವಗಳಿಗೆ ಅಗೇಲು ಸೇವೆಯು ನಡೆಯಿತು.




