ಉಡುಪಿ: ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶೀತಲೀಕೃತ ಶವಾಗಾರದಲ್ಲಿ 40 ದಿನಗಳಿಂದ ರಕ್ಷಿಸಿಡಲಾಗಿದ್ದ ಅಪರಿಚಿತ ವ್ಯಕ್ತಿಯ ಶವದ ಅಂತ್ಯಸಂಸ್ಕಾರವನ್ನು ಬೀಡಿನಗುಡ್ಡೆಯ ಹಿಂದು ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.
ಕಳೆದ ಫೆ.14ರಂದು ಸಿಟಿ ಬಸ್ಸು ನಿಲ್ದಾಣದ ಸಮೀಪ ಪ್ರಜ್ಞಾಹೀನ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಕಂಡುಬಂದಿದ್ದರು. ವ್ಯಕ್ತಿಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು, ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು. ಅಲ್ಲಿ ಪರೀಕ್ಷಿಸಿದ ವೈದ್ಯರು ವೃಕ್ತಿ ಮೃತಪಟ್ಟಿರುವುದನ್ನು ದೃಢೀಕರಿಸಿದರು. ಶವವವನ್ನು ಶವಗಾರದಲ್ಲಿ ರಕ್ಷಿಸಿಡಲಾಗಿತ್ತು. ವಾರಸುದಾರರ ಬರುವಿಕೆಗಾಗಿ ಮಾಧ್ಯಮ ಪ್ರಕಟಣೆ ನೀಡಲಾಗಿತ್ತು. ಕಾಯುವಿಕೆ ಕಾಲಮಿತಿ ಕಳೆದರೂ ಮೃತರ ವಾರಸುದಾರರು ಬಾರದೆ ಇರುವುದರಿಂದ, ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಅಂತ್ಯಸಂಸ್ಕಾರವನ್ನು ನಡೆಸಲಾಯಿತು.
ನಗರ ಪೋಲಿಸ್ ಠಾಣೆಯ ಎ.ಎಸ್ ಐ ವಿಜಯ್, ತನಿಖಾ ಸಹಾಯಕ ಹರೀಶ್ ಮಾಳ, ಕಾನೂನು ಪ್ರಕ್ರಿಯೆ ನಡೆಸಿದರು. ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡುವರ ನೇತೃತ್ವದಲ್ಲಿ ಅಂತ್ಯಸಂಸ್ಕಾರ ಕಾರ್ಯಗಳು ನಡೆದವು. ನಾಗರಿಕ ಸಮಿತಿಯ ಪ್ರದೀಪ್ ಅಜ್ಜರಕಾಡು, ಸೋನಿ ಅಜ್ಜರಕಾಡು ಭಾಗಿಯಾಗಿದ್ದರು, ವಿಕಾಸ್ ಶೆಟ್ಟಿ, ಫ್ಲವರ್ ವಿಷ್ಣು, ಅಣ್ಣಪ್ಪ ಪೂಜಾರಿ ಕರಂಬಳ್ಳಿ, ಸಹಕರಿಸಿದರು.