ಉಡುಪಿ: ಕರಾವಳಿಯಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಜನರು ಅಭಿವೃದ್ಧಿಗೆ ಬೆಲೆ ಕೊಡುತ್ತಿದ್ದಾರೆಯೇ ಹೊರತು ಬರೇ ವ್ಯಕ್ತಿಗಲ್ಲ. ನಾನು ನನ್ನ ಹಿಂದಿನ ಕಾರ್ಯಸಾಧನೆ ಹಾಗೂ ಹಾಗೂ ಪಕ್ಷದ ಸಾಧನೆಗಳನ್ನು ಮುಂದಿಟ್ಟುಕೊಂಡು ಮತ ಯಾಚಿಸುತ್ತಿದ್ದೇನೆ. ಅದಕ್ಕೆ ಜನರು ಹಿಂದೆಯೂ ಸ್ಪಂದಿಸಿದ್ದಾರೆ ಈ ಬಾರಿಯೂ ಸ್ಪಂದಿಲಿದ್ದಾರೆ ಎಂಬ ನಂಬಿಕೆ ಇದೆ.
ಚುನಾವಣೆಯಲ್ಲಿ ಗೆದ್ದು ಬಳಿಕ ಆ ಕ್ಷೇತ್ರದಿಂದಲೇ ನಾಪತ್ತೆಯಾದ ಜನಪ್ರತಿನಿಧಿಗಳ ಬಗ್ಗೆ ಜನರಿಗೆ ಅರಿವಿದೆ. ಜನಪ್ರತಿನಿಧಿ ತನ್ನ ಕರ್ತವ್ಯವನ್ನು ನಿಭಾಯಿಸಬೇಕೇ ಹೊರತು ಸೇವೆಯನ್ನಲ್ಲ ಎಂದು ಉಡುಪಿ-ಚಿಕ್ಕಮಗಳೂರು ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಅಭಿಪ್ರಾಯಪಟ್ಟರು.
ಅವರು ಕುಂದಾಪುರ ತಾಲೂಕಿನ ಬೀಜಾಡಿ ಗೋಪಾಡಿಯಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. “ಈ ಹಿಂದೆ ಸಚಿವನಾಗಿದ್ದಾಗ ಯಾವ ರೀತಿಯ ಕೆಲಸವನ್ನು ಮಾಡಿದ್ದೇನೆ ಎಂದು ಜನ ಈಗಲೂ ಹೇಳುತ್ತಿದ್ದಾರೆ. ಆ ಮಾರ್ಗದಲ್ಲೇ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ. ಮೀನುಗಾರರ ಬದುಕಿಕಾಗಿ ನಾನು ಮಾಡಿದ ಕೆಲಸ ಅವರು ಈ ಹಿಂದೆಯೂ ಪ್ರೀತಿ ತೋರಿದ್ದಾರೆ, ಈಗಲೂ ಅದೇ ಪ್ರೀತಿ ಹಸಿರಾಗಿದ್ದು ಮುಂದೆಯೂ ಆ ಪ್ರೀತಿಯನ್ನು ನೀಡುತ್ತಾರೆಂಬ ನಂಬಿಕೆ ಇದೆ ಎಂದರು.
ಈ ಹಿಂದೆ ಚುನಾವಣೆಯಲ್ಲಿ ನೀವು ನನ್ನನ್ನು ಗೆಲ್ಲಿಸಿದುದರ ಪರಿಣಾಮ ವಿವಿಧ ಇಲಾಖೆಗಳಲ್ಲಿ ಉತ್ತಮ ಸಂಬಂಧವನ್ನಿರಿಸಿಕೊಳ್ಳಲು ಸಾಧ್ಯವಾಯಿತು. ಗೆದ್ದು ಜನಪರ ಕಾರ್ಯಗಳನ್ನು ಮಾಡಿದ ಖುಷಿ ಇದೆ. ಸೋತಾಗಲೂ ಇಲಾಖೆಯ ಸಂಪರ್ಕವಿರಿಸಿಕೊಂಡು ಕೆಲಸ ಮಾಡಿದ್ದೇನೆ. ಇವತ್ತು ಜನರ ಬಳಿ ಹೋದಾಗ ಅವರು ಅತ್ಯಂತ ಆತ್ಮೀಯತೆಯಿಂದ ಬರಮಾಡಿಕೊಂಡಿದ್ದಾರೆ. ನಮ್ಮ ಜನರು ಪ್ರಗತಿಯನ್ನು ಮಾಡಿದವರಿಗೆ ಯಾವಾಗಲೂ ಪ್ರೋತ್ಸಾಹ ನೀಡುತ್ತಾರೆ. ಅದಕ್ಕೆ ಚಿಕ್ಕಮಗಳೂರು ಮತ್ತು ಉಡುಪಿಯಲ್ಲಿ ಸಿಕ್ಕ ಪ್ರತಿಕ್ರಿಯೆಯೇ ಸಾಕ್ಷಿ. ಈಗ ಮತ ಯಾಚನೆಗೆ ಸಾಗುತ್ತಿರುವಾಗ ಹಿಂದೆ ಮಾಡಿದ್ದ ರಸ್ತೆ, ಸೇತುವೆ ಮತ್ತು ಡ್ಯಾಮ್ಗಳು ಯಶಸ್ಸಿನ ಹಾದಿಯನ್ನು ನೆನಪಿಸುತ್ತಿವೆ. ಆದ್ದರಿಂದ ಮುಂದೆ ಹೋಗಿ ಮತ ಕೇಳಲು ಧೈರ್ಯಬರುತ್ತದೆ ಎಂದರು.
ಮಾಜಿ ಶಾಸಕ ಗೋಪಾಲ ಪೂಜಾರಿಯವರು ಮಾತನಾಡಿ, “ಕೋಟ ಶ್ರೀನಿವಾಸ ಪೂಜಾರಿ ಅವರು ರಾಜ್ಯದಲ್ಲಿರುವ ಬಿಜೆಪಿಯ ಎಲ್ಲ ನಾಯಕರನ್ನು ರಾಜಕೀಯ ಬದುಕನ್ನು ಮುಗಿಸಿ ಈ ಡೆಲ್ಲಿಗೆ ಹೊರಡಲು ಮತ ಯಾಚಿಸುತ್ತಿದ್ದಾರೆ. ಬಡವ ಎಂದು ಹೇಳಿಕೊಂಡು ಶ್ರೀಮಂತ ಬದುಕನ್ನು ನಡೆಸುತ್ತಿದ್ದ ವ್ಯಕ್ತಿ ಜನರಿಗೆ ಎಷ್ಟು ಸುಳ್ಳು ಹೇಳುತ್ತಿದ್ದಾರೆ ಎಂಬುದನ್ನು ಗಮನಿಸಿ,” ಎಂದರು.
“ಸಂಸತ್ತಿನಲ್ಲಿ ರಾಜ್ಯದ ಸಮಸ್ಯೆಗಳನ್ನು ಮುಂದಿಟ್ಟು ಆ ಬಗ್ಗೆ ಚರ್ಚಿಸಿ, ತನ್ನ ಕ್ಷೇತ್ರದ ಜನತೆಗೆ ನ್ಯಾಯ ಒದಗಿಸುವ ಕೆಲಸವನ್ನು ಮಾಡುವ ಜಯಪ್ರಕಾಶ್ ಹೆಗ್ಡೆ ಅವರಿಗೆ ಮತ ನೀಡಿ, ಮತ್ತೊಮ್ಮೆ ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರದ ಅಭಿವೃದ್ಧಿಗೆ ಅವಕಾಶ ನೀಡಬೇಕು,” ಎಂದು ಮತದಾರರಲ್ಲಿ ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾದ ಮಳವಳ್ಳಿ ದಿನೇಶ್ ಹೆಗ್ಡೆ, ಮಲ್ಯಾಡಿ ಶಿವರಾಮ ಶೆಟ್ಟಿ, ಗಫೂರ್, ಕುಂದಾಪುರ ಬ್ಲಾಕ್ ಕಾಂಗ್ರೆಸ್ನ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಮೊದಲಾದ ಗಣ್ಯರು ಹಾಜರಿದ್ದರು.