ಉಡುಪಿ: ಸೌರ ಯುಗಾದಿಯ ಪ್ರಯುಕ್ತ ಉಡುಪಿ ಕೃಷ್ಣ ದೇವರಿಗೆ ಪರ್ಯಾಯ ಪುತ್ತಿಮಠದ ಕಿರಿಯ ಸುಶ್ರೀಂದ್ರ ತೀರ್ಥ ಶ್ರೀಪಾದರು ಗೀತೋಪದೇಶ ಅಲಂಕಾರ ಮಾಡಿದರು.
ಆ ಬಳಿಕ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಮಹಾ ಪೂಜೆಯನ್ನು ನೆರವೇರಿಸಿದರು. ಸೌರ ಯುಗಾದಿಯ ಪ್ರಯುಕ್ತ ರಥಬೀದಿಯಲ್ಲಿ ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ಚಿನ್ನದ ರಥೋತ್ಸವ ನಡೆಯಿತು. ನಂತರ ಅಷ್ಟಾವಧಾನ ಸೇವೆಯೊಂದಿಗೆ ತೊಟ್ಟಿಲು ಪೂಜೆ ನಡೆಯಿತು. ಈ ಸಂದರ್ಭ ನಿರಂತರ ಜ್ಞಾನಯಜ್ಞ ಕಾರ್ಯಕ್ರಮದ ಅಂಗವಾಗಿ ಭಗವದ್ಗೀತೆಯಲ್ಲಿ ಚಾತುರ್ವರ್ಣ್ಯ ಎಂಬ ವಿಷಯದ ಬಗ್ಗೆ ವಿದ್ವಾನ್ ಕೃಷ್ಣರಾಜ ಕುತ್ಪಾಡಿ ಅವರು ಪ್ರವಚನ ಮಂಗಳ ನಡೆಸಿದರು.
ನಂತರ ಪರ್ಯಾಯ ಮಠದ ಪುರೋಹಿತರಾದ ಹೆರ್ಗ ವೇದವ್ಯಾಸ ಭಟ್ ಇವರು ಕ್ರೋಧಿ ನಾಮ ಸಂವತ್ಸರದ ಪಂಚಾಂಗ ಶ್ರವಣ ನಡೆಸಿದರು.
ಪರ್ಯಾಯ ಶ್ರೀ ಪಾದರು ನೂತನ ಸಂವತ್ಸರದಲ್ಲಿ ಆಶೀರ್ವಚನ ನೀಡಿ ಹರಸಿದರು.