ವಿಟ್ಲ: ಉಕ್ಕುಡ-ದರ್ಬೆ ಭಾಗದಲ್ಲಿ ನೀರಿಗಾಗಿ ಪರದಾಟ: ಪ.ಪಂ ವಿರುದ್ಧ ಆಕ್ರೋಶ

Share with

ವಿಟ್ಲ: ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಉಕ್ಕುಡ ದರ್ಬೆ ಭಾಗದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಗ್ರಾಮಸ್ಥರು ಪಂಚಾಯತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಉಕ್ಕುಡ ದರ್ಬೆ ಭಾಗದಲ್ಲಿ ನೂರಕ್ಕಿಂತಲೂ ಅಧಿಕ ಮನೆಗಳಿವೆ. ಈ ಭಾಗದ ಬಹುತೇಕ ನಿವಾಸಿಗಳು ಪಂಚಾಯತ್ ನೀರನ್ನು ಅವಲಂಭಿಸಿದ್ದಾರೆ. ಕೆಲವರಿಗೆ ಬಾವಿ ಇದ್ದರೂ ಬಾವಿ ಬತ್ತಿ ಹೋಗಿದೆ. ಇನ್ನೂ ಕೆಲವರು ೫ ಸೆಂಟ್ಸ್ ಜಾಗದಲ್ಲಿ ಮನೆ ಕಟ್ಟಿದ್ದು, ಬಾವಿ ತೊಡಲು ಸ್ಥಳದ ಕೊರತೆಯಿಂದ ಪಂಚಾಯತ್ ನೀರು ಅವರಿಗೆ ಅನಿವಾರ್ಯವಾಗಿದೆ.

ದರ್ಬೆ ಕ್ವಾಟ್ರಸ್ ನಲ್ಲಿ ಮೂರು ನೀರಿನ ಟ್ಯಾಂಕ್ ಇದೆ. ೪ ಕೊಳವೆ ಬಾವಿಯ ನೀರು ಈ ಟ್ಯಾಂಕ್ ನಲ್ಲಿ ಸಂಗ್ರಹವಾಗುತ್ತದೆ. ಆದರೆ ಜನರಿಗೆ ನೀರು ಸರಿಯಾಗಿ ಬರುತ್ತಿಲ್ಲ. ಪಟ್ಟಣ ಪಂಚಾಯತ್ ವತಿಯಿಂದ ಎಂಟು ದಿನಕ್ಕೊಮ್ಮೆ ೨೫೦ ಲೀಟರ್ ನೀರನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡುತ್ತಿದ್ದು, ಇದು ಒಂದೇ ದಿನಕ್ಕೆ ಸಾಕಾಗುತ್ತದೆ ಎಂದು ಹೇಳುತ್ತಾರೆ ಗ್ರಾಮಸ್ಥರು.

ಇಲ್ಲಿಯ ಬಹುತೇಕ ಮಂದಿ ಖಾಸಗಿ ವಾಹನದವರಿಗೆ ಬಾಡಿಗೆ ನೀಡಿ ಹೊರಗಡೆಯಿಂದ ನೀರು ತರಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿಗೆ ತಿಂಗಳಿನ ನೀರಿನ ಹಣ ಕಟ್ಟಬೇಕು. ಖಾಸಗಿ ವಾಹನಗಳಲ್ಲಿ ಹಣ ನೀಡಿ ನೀರು ತರಬೇಕು. ನಾವು ದುಡಿದ ಹಣ ನೀರಿಗೆ ಸಾಕಾಗುತ್ತದೆ ಇನ್ನೂ ನಾವು ದಿನ ದೂಡುವುದು ಹೇಗೆ ಎಂದು ಹೇಳುತ್ತಿದ್ದಾರೆ. ಪಂಚಾಯತ್ ನವರು ಈ ಭಾಗದ ಜನರಿಗೆ ಶಾಶ್ವತ ನೀರಿನ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ವಾಟರ್‌ಮ್ಯಾನ್ ಸರಿಯಾಗಿ ನೀರು ಬಿಡದ ಕಾರಣ ಇಲ್ಲಿ ಸಮಸ್ಯೆಯಾಗಿದೆ. ವಾಟರ್ ಮ್ಯಾನ್ ನಲ್ಲಿ ಗ್ರಾಮಸ್ಥರು ವಿಚಾರಿಸಿದಾಗ ಕೊಳವೆ ಬಾವಿ ಕೊಟ್ಟು ಹೋದ ಕಾರಣ ನೀರು ಬಿಡಲು ಆಗುತ್ತಿಲ್ಲ. ನೀರು ಇದ್ದರೆ ತಾನೇ ಬಿಡುವುದು ಎಂದು ಹೇಳುತ್ತಾರೆ. ಇನ್ನೂ ಕೆಲವರು ಪ್ರಕಾರ ನಾಲ್ಕು ಕೊಳವೆ ಬಾವಿಯಲ್ಲಿ ತಲಾ ೧೦ ,೨೦ ನಿಮಿಷ ಮಾತ್ರ ನೀರು ಬಿಡಲಾಗುತ್ತಿದೆ. ಅದು ೧೦೦ ಕ್ಕಿಂತಲೂ ಅಧಿಕ ಮನೆಗಳಿಗೆ ಹೇಗೆ ಸಾಕಾಗುತ್ತದೆ ಎಂದು ಹೇಳುತ್ತಿದ್ದಾರೆ.
ಇಲ್ಲಿಯ ನೀರಿನ ಸಮಸ್ಯೆಯ ಬಗ್ಗೆ ಪಟ್ಟಣ ಪಂಚಾಯತ್ ಅಧಿಕಾರಿಗಳ ಮತ್ತು ಬಂಟ್ವಾಳ ತಹಸೀಲ್ದಾರ್ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ ಎನ್ನುತ್ತಾರೆ ಪಟ್ಟಣ ಪಂಚಾಯತ್ ಸದಸ್ಯೆ ಸುನೀತಾ ಅವರು. ಮಳೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಇದೇ ರೀತಿಯಾಗಿ ನೀರಿನ ಸಮಸ್ಯೆ ಮುಂದುವರಿದರೆ ಬೇರೆ ಪರಿಸರಕ್ಕೆ ಸ್ಥಳಾಂತರಗೊಳ್ಳುವ ಅನಿವಾರ್ಯತೆ ಎದುರಾಗಲಿದ್ದು, ತಕ್ಷಣವೇ ಪಂಚಾಯಿತಿ ನಮ್ಮ ಸಮಸ್ಯೆಗೆ ಸ್ಪಂದಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.


Share with

Leave a Reply

Your email address will not be published. Required fields are marked *