ವಿಟ್ಲ : ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಹಕಾರಿ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ವಿಟ್ಲಕಸಬಾ ಗ್ರಾಮದ ಕೂಡೂರು ನಿವಾಸಿ ಎಲ್.ಎನ್.ಕೂಡೂರು(67) ಅವರು ಜೂ.30ರಂದು ಅನಾರೋಗ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಹಿರಿಯ ಸಾಮಾಜಿಕ, ಧಾರ್ಮಿಕ ಮುಂದಾಳು ಕೂಡೂರು ಕೃಷ್ಣ ಭಟ್ ಅವರು ಪುತ್ರ ಲಕ್ಷ್ಮಿ ನಾರಾಯಣ ಕೂಡೂರು ಎಲ್.ಎನ್.ಕೂಡೂರು ಎಂದೇ ಜನಪ್ರಿಯರಾಗಿದ್ದರು. ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಹಕಾರಿ ಕ್ಷೇತ್ರದಲ್ಲಿ ಕೈಯಾಡಿಸಿ ಸೈ ಎನಿಸಿಕೊಂಡಿದ್ದರು.
ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ, ದೇಗುಲದ ಬ್ರಹ್ಮಕಲಶ ಸಂಭ್ರಮದ ರೂವಾರಿಯಾಗಿ ಜನಮೆಚ್ಚುಗೆ ಗಳಿಸಿದ್ದರು.
ಸಹಕಾರಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕ್ಯಾಂಪ್ಕೊ ಅಧ್ಯಕ್ಷರಾಗಿ, ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಜೇಸಿ ಕ್ಲಬ್ ನ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಗುರುತಿಸಿ ಕೊಂಡಿದ್ದರು.
ಪ್ರಸ್ತುತ ವಿಟ್ಲ ಬಸವನಗುಡಿ ವಿಠಲ್ ಜೇಸೀಸ್ ಎಜುಕೇಶನ್ ಸೊಸೈಟಿ ಅಧ್ಯಕ್ಷರಾಗಿ, ವಿಠಲ ವಿದ್ಯಾ ಸಂಘದ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು.