
ಉಪ್ಪಳ : ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ ದಿನಾಂಕ 28.07.2024 ಆದಿತ್ಯವಾರದಂದು ಶ್ರೀ ನಿತ್ಯಾನಂದ ಆಯುರ್ವೇದ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲ್ಲಿ ಔಷಧೀಯ ಗಿಡಮೂಲಿಕೆಗಳಿಂದ ಹಾಗೂ ಪರಿಸರದಲ್ಲಿ ದೊರಕುವ ಗಿಡ, ಎಲೆ, ಹೂ ಇತ್ಯಾದಿಗಳನ್ನು ಬಳಸಿ ತಯಾರಿಸುವ “ಕರ್ಕಾಟಕ ಮಾಸದ ಔಷಧೀಯ ಗಂಜಿ” ಕಾರ್ಯಕ್ರಮ ಸಂಭ್ರಮದಿAದ ನಡೆಯಿತು. ಈ ಸಂದರ್ಭದಲ್ಲಿ ಮಂಗಳೂರು ಕರ್ನಾಟಕ ಆರ್ಯುವೇದ ಕಾಲೇಜಿನ ಪ್ರಾಂಶುಪಾಲರು ಡಾ. ರವಿರಾವ್, ಮತ್ತು ಮಲಪ್ಪುರಂ ಗಂಗಾಧರನ್ ಉಣ್ಣಿ ವೈದ್ಯರ್ ರವರುಗಳು ಕರ್ಕಾಟಕ ಮಾಸದ ಔಷಧಿ ಗಂಜಿಯ ಮಹತ್ವದ ಬಗ್ಗೆ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ದೀಪ ಪ್ರಜ್ವಲಿಸಿ, ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ತಮ್ಮ ಆಶೀರ್ವಚನದಲ್ಲಿ “ನಾವೆಲ್ಲರು ಔಷಧ ಗಂಜಿಯನ್ನು ಸೇವಿಸಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಶರೀರ ಸ್ವಾಸ್ಥö್ಯವನ್ನು ಕಾಪಾಡಿಕೊಳ್ಳೋಣ ”ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಕಳೆದ 15 ವರ್ಷಗಳಿಂದ ನೂರಾರು ವಿಷಬಾಧಿತರಿಗೆ ಚಿಕಿತ್ಸೆಯನ್ನು ನೀಡಿ, ತಮ್ಮ ವಂಶವಾಹಿಯಾಗಿ ಬಂದ ವಿಷಚಿಕಿತ್ಸೆಯ ಮೂಲಕ ಜನಮನ್ನಣೆಗಳಿಸಿದ ಕಿನ್ನಿಂಗಾರು ಸಸಿಹಿತ್ಲುವಿನ ನಾಟಿ ವೈದ್ಯೆ ಶ್ರೀಮತಿ ಶ್ಯಾಮಲಾ ರೈ ಇವರಿಗೆ ಪರಮಪೂಜ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರ ಸಮ್ಮುಖದಲ್ಲಿ “ ಆಯುಶ್ರೀ-2024” ಪುರಸ್ಕಾರ ನೀಡಿ ಆರ್ಶೀವದಿಸಿದರು. ಶ್ರೀ ನಿತ್ಯಾನಂದ ಆಯುರ್ವೇದಿಕ್ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಶ್ರೀ ಕೆ ಜೆ ಜಯದೇವನ್ ಕಣ್ಣೂರ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಮಂಜೇಶ್ವರ ತಾಲೂಕಿನ ತಹಶೀಲ್ದಾರ್ ಶ್ರೀಯುತ ಶಿಬು, ಶ್ರೀ ಚಂದ್ರಶೇಖರ್ ಬೆಂಗಳೂರು, ಮಂಗಳೂರಿನ ಶ್ರೀಮತಿ ಸುಲೋಚನ ಭಟ್, ಉದ್ಯಮಿ ಶ್ರೀ ಶ್ರೀಧರ್ ಶೆಟ್ಟಿ ಮುಟ್ಟಂ ಮೊದಲಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಣ್ಣೂರಿನ ಖ್ಯಾತ ನಾಟಿ ವೈದ್ಯರಾದ ಶ್ರೀ ಪವಿತ್ರನ್ ಗುರುಕ್ಕಳ್ ಮತ್ತು ಹಲಸಿನ ವಿವಿಧ ತಳಿಗಳ ಬಗ್ಗೆ ಸಂಶೋದನೆ ನಡೆಸಿದ ಶ್ರೀ ಶೀಬಾ ಸತೀಶ್ ಕಣ್ಣೂರು ಇವರಿಗೂ ಶಾಲು ಹಾಕಿ ಗೌರವಿಸಲಾಯಿತು. ಶ್ರೀಮತಿ ಸುಮಂಗಲ ಮಂಗಳೂರು (ಮಡಿಲು ಸೇವ ತಂಡದ ಕಾರ್ಯಕರ್ತೆ) ಇವರ ಪ್ರಾರ್ಥನೆ, ಶ್ರೀ ಗಂಗಾಧರ್ ಕೊಂಡೆವೂರು ಸ್ವಾಗತಿಸಿದ ಕಾರ್ಯಕ್ರಮವನ್ನು ಶ್ರೀ ದಿನಕರ್ ಹೊಸಂಗಡಿ ಅವರು ವಂದನಾರ್ಪಣೆಗೈದು ನಿರೂಪಣೆಗೈದರು.
ಕೇರಳದ ವಿವಿಧ ಭಾಗಗಳಿಂದ ಆಗಮಿಸಿದ ನಾಟಿ ವೈದ್ಯರುಗಳು ಪರಿಸರದ ಗಿಡ, ಎಲೆ, ಹೂಗಳನ್ನು ಮತ್ತು ಔಷಧೀಯ ಗಿಡಮೂಲಿಕೆಗಳನ್ನು ಬಳಸಿ ತಯಾರಿಸಿದ ಖಾದ್ಯವಸ್ತುಗಳಿಂದ ಕೂಡಿದ ಔಷಧೀಯ ಗಂಜಿಯನ್ನು 1000 ಕ್ಕೂ ಹೆಚ್ಚು ಜನರು ಸವಿದು ಸಂತಸ ಪಟ್ಟರು.





