
ಕಾಸರಗೋಡು:ಬೇಕಲ ರೈಲ್ವೆ ನಿಲ್ದಾಣದಲ್ಲಿ ರೈಲಿಗೆ ಕಲ್ಲೆಸೆದ ಆರೋಪಿಯನ್ನು ಗಂಟೆಗಳ ಅವಧಿಯಲ್ಲಿ ರೈಲ್ವೆ ಪೊಲೀಸರು ಬಂಧಿಸಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ತೆಕ್ಕಿಲ್ ಮೈಲಾಟಿ ಯ ಎಸ್ .ಅನಿಲ್ ಕುಮಾರ್ (41) ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಮಂಗಳೂರಿನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದ ಮಲಬಾರ್ ಎಕ್ಸ್ ಪ್ರೆಸ್ ರೈಲಿಗೆ ಆದಿತ್ಯವಾರ ರಾತ್ರಿ ಕಲ್ಲೆಸೆದಿದ್ದನು. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಈತ ಇದೇ ರೈಲಿನಲ್ಲಿದ್ದ ಯುವತಿಗೆ ಕಿರುಕುಳ ನೀಡಲೆತ್ನಿಸಿದ್ದು, ಇದನ್ನು ಯುವತಿ ಜೊತೆ ಇದ್ದ ಯುವಕ ಪ್ರಶ್ನಿಸಿದ್ದಾನೆ. ಈ ಸಂದರ್ಭ ದಲ್ಲಿ ಈತ ಹಲ್ಲೆಗೆ ಮುಂದಾಗಿದ್ದಾನೆ. ಆರೋಪಿ ಪಾನಮತ್ತನಾಗಿದ್ದನು ಎನ್ನಲಾಗಿದೆ. ಬೇಕಲ ರೈಲ್ವೆ ನಿಲ್ದಾಣದಲ್ಲಿ ಇಳಿದ ಈತ ಮತ್ತೆ ದಾಂಧಲೆಗೆ ಮುಂದಾಗಿದ್ದು, ರೈಲಿಗೆ ಕಲ್ಲೆಸೆದಿದ್ದನು.




