
ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ ಶಿರಾಡಿಯಲ್ಲಿ ಅವೈಜ್ಞಾನಿಕ ಕಾಮಗಾರಿ ಹಾಗೂ ಪರಿಹಾರ ನೀಡದ ಕಾರಣಕ್ಕೆ ಮನೆಗಳನ್ನು ಸ್ಥಳಾಂತರ ಮಾಡದೆ ಐದಾರು ಕುಟುಂಬಗಳು ಇದೀಗ
ಅಪಾಯಕ್ಕೆ ಸಿಲುಕಿವೆ.

‘ರಸ್ತೆ ನಿರ್ಮಾಣಕ್ಕೆ ಹಾಗೂ ತಡೆಗೋಡೆಗೆ ಗುಡ್ಡವನ್ನು ಕಡಿದಾಗಿ ಮಣ್ಣು ಬಗೆದು ಅನಾಹುತ ಸೃಷ್ಟಿಯಾಗಿದೆ. ಇದನ್ನು ಮನಗಂಡ ಅಧಿಕಾರಿಗಳು ರಸ್ತೆ ಸಮೀಪವೇ ಇದ್ದ ಎಂಟು ಮನೆಗಳಲ್ಲಿ ವಾಸಿಸುತ್ತಿದ್ದವರನ್ನು ಸ್ಥಳಾಂತರ ಮಾಡಿದ್ದಾರೆ. ಇನ್ನೂ ಐದು ಕುಟುಂಬದ ಮನೆಗಳಿಗೆ.
ಪರಿಹಾರ ನೀಡದೆ ಅನ್ಯಾಯ ಮಾಡಿದ್ದು, ರಸ್ತೆಯಿಲ್ಲದೆ ಅಪಾಯದ ಪ್ರದೇಶದಲ್ಲಿ ಮಕ್ಕಳ ಜತೆ ವಾಸ ಮಾಡುತ್ತಿದ್ದೇವೆ,ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.
ಸಕಲೇಶಪುರ ತಾಲೂಕು ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡಂತೆ ಇರುವ ಆನೆಮಹಲ್, ಮಂಜ್ರಾಬಾದ್ ಕೋಟೆ, ಮಾರನಹಳ್ಳಿ ಮಾರ್ಗದಲ್ಲಿ ಮನೆಯ ಸಮೀಪ ಮಣ್ಣು ಕುಸಿಯುತ್ತಿದ್ದು, ನಿತ್ಯವೂ ಭಯದಲ್ಲಿಯೇ ಬದುಕುತ್ತಿರುವ ಕುಟುಂಬಗಳು ತಮ್ಮನ್ನೂ ಸ್ಥಳಾಂತರ ಮಾಡಿ, ಎಂದು ಮೊರೆ ಇಟ್ಟಿದ್ದಾರೆ. ಸಕಲೇಶಪುರ, ಆಲೂರು, ಬೇಲೂರು, ಹಾಸನ ಭಾಗದಲ್ಲಿ ಧಾರಾಕಾರ ಮಳೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸಕಲೇಶಪುರ ತಾಲೂಕಿನ, ಆನೆಮಹಲ್ ಬಳಿ ಭೂಕುಸಿತ ಪ್ರಕರಣದ ಸ್ಥಳಕ್ಕೆ ಎಸಿ ಶೃತಿ, ತಹಸೀಲ್ದಾರ್ ಅರವಿಂದ್ ಭೇಟಿ ನೀಡಿ ತುರ್ತು ದುರಸ್ತಿ ಕಾಮಗಾರಿ ಪರಿಶೀಲನೆ ನಡೆಸಿದರು.




