ಕೊಚ್ಚಿ : ಕೇರಳದ ಮಾಜಿ ಡಿಜಿಪಿ, ನಿವೃತ್ತ ಹಿರಿಯ ಪೋಲೀಸ್ ವರಿಷ್ಠ ಜೇಕಬ್ ಥಾಮಸ್ ಪೂರ್ಣಾವಧಿ ಆರ್. ಎಸ್. ಎಸ್. ಕಾರ್ಯಕರ್ತನಾಗಿ ಸಮಾಜಸೇವೆಗಿಳಿಯಲು ಮುಂದಾಗಿದ್ದಾರೆ. ಇದೇ ವಿಜಯದಶಮಿ ದಿನದಂದು ನಡೆಯಲಿರುವ ಪಥಸಂಚಲನದಲ್ಲಿ ಸಂಪೂರ್ಣ ಗಣವೇಷಧಾರಿಯಾಗಿ ಪಾಲ್ಗೊಂಡು ಅವರು ಸಂಘ ಚಟುವಟಿಕೆಗೆ ಕಾಲೂರುವರೆಂದು ಹೇಳಲಾಗಿದೆ.

ನಿವೃತ್ತಿಯ ಬಳಿಕ ಬಿಜೆಪಿ ಪಕ್ಷದ ಜತೆ ಗುರುತಿಸಿಕೊಂಡಿದ್ದ ಅವರು 2021ರ ವಿಧಾನಸಭಾ ಚುನಾವಣೆಯಲ್ಲಿ ಇರಿಂಙಾಲಕ್ಕುಡ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಯಾಗಿ ಸ್ಪರ್ಧಿಸಿದ್ದರು. ಈ ಮೂಲಕ ಆರ್. ಎಸ್. ಎಸ್ ನಿಕಟವರ್ತಿಯಾಗಿ ಸಂಘದ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಅವರು ರಾಜಕೀಯಕ್ಕಿಂತಲೂ ತನಗೆ ಸಮಾಜ ಸೇವೆಗೆ ಸೂಕ್ತ ಜಾಗ ಆರ್. ಎಸ್. ಎಸ್ ಎಂದು ಮನಗಂಡಿದ್ದೇನೆ. ಆದ್ದರಿಂದ ಪೂರ್ಣಾವಧಿ ಪ್ರಚಾರಕನಾಗಿ ಸಂಘಕ್ಕೆ ನನ್ನ ಸೇವೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಕೇರಳದಲ್ಲಿ ಇತ್ತೀಚಿನ ವರ್ಷಗಳಲ್ಲಿ ಡಿಜಿಪಿಯಾಗಿ ನಿವೃತ್ತರಾದ ಉನ್ನತ ಪೊಲೀಸಧಿಕಾರಿಗಳು ಆರ್. ಎಸ್. ಎಸ್ ನತ್ತ ಬರುವುದು ಇದೇ ಮೊದಲೇನಲ್ಲ. ಮಾಜಿ ಡಿಜಿಪಿ ಆರ್. ಶ್ರೀಲೇಖ ಈಗಾಗಲೇ ಬಿಜೆಪಿ ಸದಸ್ಯತ್ವ ಸ್ವೀಕರಿಸಿ, ಆರ್. ಎಸ್ ಎಸ್ ನೆರಳಿಗೆ ಬಂದು ಪಕ್ಷದ ಸಂಘಟನಾ ಜವಾಬ್ದಾರಿ ಹೊಂದಿದ್ದಾರೆ. ಮಾಜಿ ಡಿಜಿಪಿ ಸೆನ್ ಕುಮಾರ್ ಕೂಡಾ ಸಂಘ, ಪರಿವಾರದ ನಿಕಟತೆ ಹೊಂದಿ ಬಿಜೆಪಿ ಗೆ ಬಂದಿದ್ದಾರೆ. ಆದರೆ ಮಾಜಿ ಡಿಜಿಪಿಯೊಬ್ಬರು ಪೂರಣಾವಧಿ ಸಂಘ ಪ್ರಚಾರಕನಾಗಿ ತನ್ನನ್ನು ಅರ್ಪಿಸಿಕೊಳ್ಳುವುದು ಕೇರಳದಲ್ಲಿ ಇದೇ ಮೊದಲು.
ಈ ಬಾರಿಯ ವಿಜಯದಶಮಿ ದಿನದಂದು ಎರ್ನಾಕುಳಂ ಜಿಲ್ಲೆಯ ಪಳ್ಳಿಕೆರೆಯಲ್ಲಿ ನಡೆಯುವ ಪಥಸಂಚಲನದಲ್ಲಿ ಮಾಜಿ ಡಿಜಿಪಿ ಜೇಕಬ್ ಥಾಮಸ್ ಗಣವೇಷಧಾರಿಯಾಗಿ ಪಾಲ್ಗೊಳ್ಳುವರು. ಅಂದಿನಿಂದ ಸಂಘ ನೀಡುವ ಕರ್ತವ್ಯ ವಹಿಸಿ ಪೂರ್ಣಾವಧಿ ಪ್ರಚಾರಕನಾಗುವರು. ಕಳೆದ ಕೆಲ ವರ್ಷಗಳಿಂದ ಇವರು ಸಂಘ ಸಂಪರ್ಕದ ನಿಕಟತೆಯಲ್ಲಿದ್ದರು.




