ಹೊಸದಿಲ್ಲಿ: ತಮಿಳುನಾಡು ರಾಜಕೀಯದಲ್ಲಿ ಕಮಲ ಪಕ್ಷದ ಹೊಸ ಅಲೆ ಸೃಷ್ಟಿಸುವ ಭರವಸೆ ಮೂಡಿಸಿದ್ದ, ದಕ್ಷಿಣದ ರಾಜ್ಯದ ಸಾಂಪ್ರದಾಯಿಕ ರಾಜಕಾರಣವನ್ನು ಮೀರಿ ಮುನ್ನಡೆಯುವ ಆಶಯ ಹೊಂದಿದ್ದ, ಮಾಜಿ ಐಪಿಎಸ್ ಅಧಿಕಾರಿ, ತಮಿಳುನಾಡು ಬಿಜೆಪಿ ಮಾಜಿ ರಾಜ್ಯ ಅಧ್ಯಕ್ಷ ಕೆ. ಅಣ್ಣಾಮಲೈ (K. Annamalai) ಅವರು ಪಕ್ಷದೊಂದಿಗೆ ಒಡನಾಟ ಅಂತ್ಯವಾಗಿದೆ.

ಕೆಲ ದಿನಗಳ ಹಿಂದೆ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಲ್ಲಿಸಿದ ರಾಜೀನಾಮೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಇದೀಗ ಅಂಗೀಕರಿಸಿದ್ದಾರೆ.
“ತಮಿಳುನಾಡು ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಲ್ಲಿಸಿದ ರಾಜೀನಾಮೆಯನ್ನು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅಂಗೀಕರಿಸಿದ್ದಾರೆ” ಎಂದು ಬಿಜೆಪಿ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅಣ್ಣಾಮಲೈ ಅವರು ಮಂಗಳವಾರ (ಜೂನ್ 2) ಪಕ್ಷದ ನಾಯಕತ್ವಕ್ಕೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು, ಇದೇ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಆದರೆ ಇದೀಗ ರಾಜೀನಾಮೆ ಅಂಗೀಕಾರವಾಗುವುದರೊಂದಿಗೆ ಕಮಲ ಪಕ್ಷದಲ್ಲಿ ಅಣ್ಣಾಮಲೈ ರಾಜಕೀಯ ಜೀವನ ಅಂತ್ಯವಾಗಿದೆ.
ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಭಾವನೆಯಿಂದ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. 2024 ರ ಲೋಕಸಭಾ ಚುನಾವಣೆಯಲ್ಲಿ 11% ಮತಗಳಿಂದ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮತ ಹಂಚಿಕೆ 3% ಕ್ಕೆ ಇಳಿದಿದೆ, ಎಐಡಿಎಂಕೆ ಜೊತೆಗಿನ ಮೈತ್ರಿ ಇದಕ್ಕೆ ಕಾರಣ ಎಂದು ಇದೇ ವೇಳೆ ಅಣ್ಣಾಮಲೈ ರಾಷ್ಟ್ರೀಯ ನಾಯಕರ ಗಮನ ಸೆಳೆದಿದ್ದಾರೆ. ಎನ್ನಲಾಗಿದೆ.
ಹೊಸ ಪಕ್ಷ?
ಬಿಜೆಪಿಯಿಂದ ಹೊರಬಂದ ಅಣ್ಣಾಮಲೈ ಹೊಸ ಪಕ್ಷವೊಂದನ್ನು ಕಟ್ಟಲಿದ್ದಾರೆ ಎನ್ನಲಾಗಿದೆ. ಪ್ರಾದೇಶಿಕ ಪಕ್ಷ ಕಟ್ಟಿ ರಾಜಕೀಯವಾಗಿ ಬೆಳೆಯುವ ಗುರಿ ಹೊಂದಿದ್ದಾರೆ ಎಂದು ವರದಿಯಾಗಿದೆ.




