ಕಾಸರಗೋಡು: ವಿವಿಧ ಆರ್ಟಿಒ ಕಚೇರಿಗಳಲ್ಲಿ ವಿಜಿಲೆನ್ಸ್ ನಡೆಸಿದ ಮಿಂಚಿನ ತಪಾಸಣೆಯಲ್ಲಿ ಅಕ್ರಮ ಹಣ ಹಾಗು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾಸರಗೋಡು ವಿಜಿಲೆನ್ಸ್ ಡಿವೈಎಸ್ಪಿ ಉಣ್ಣಿಕೃಷ್ಣನ್ ನೇತೃತ್ವದಲ್ಲಿ ತಪಾಸಣೆ ನಡೆಯಿತು. ಜಿಲ್ಲೆಯ ಆರ್ಟಿಒ ಕಚೇರಿಗಳನ್ನು ಕೇಂದ್ರೀಕರಿಸಿ ವ್ಯಾಪಕವಾಗಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ರಹಸ್ಯ ಮಾಹಿತಿಯಂತೆ ವಿಜಿಲೆನ್ಸ್ ಮಿಂಚಿನ ದಾಳಿ ನಡೆಸಿತ್ತು.
ಕಾಸರಗೋಡು ಆರ್ಟಿಒ ಕಚೇರಿಯಲ್ಲಿ ನಡೆಸಿದ ತಪಾಸಣೆಯಲ್ಲಿ ಕಚೇರಿಯ ವರಾಂಡದಲ್ಲಿರಿಸಿದ ಮಣ್ಣಿನ ಪಾತ್ರೆಗಳಲ್ಲಿ ಬಚ್ಚಿಟ್ಟ 17,150 ರೂ.ಗಳನ್ನು ವಿಜಿಲೆನ್ಸ್ ತಂಡ ಪತ್ತೆಹಚ್ಚಿದೆ. ಕಾಂಞಂಗಾಡ್ ಆರ್ಟಿಒ ಕಚೇರಿಯಲ್ಲಿ ನಡೆಸಿದ ತಪಾಸಣೆಯಲ್ಲಿ ಸಿಬಂದಿ ಒಬ್ಬರಿಂದ ವಾಹನ ಸಂಬಂಧವಾದ ಅರ್ಜಿಗಳು ಹಾಗೂ ಇತರ ದಾಖಲೆಗಳನ್ನು ವಿಜಿಲೆನ್ಸ್ ವಶಪಡಿಸಿಕೊಂಡಿದೆ. ಕಾಂಞಂಗಾಡ್ ಆರ್ಟಿಒ ಕಚೇರಿಯಲ್ಲಿ ಇನ್ಸ್ಪೆಕ್ಟರ್ ನಾರಾಯಣನ್ ವೆಳ್ಳರಿಕುಂಡು ನೇತೃತ್ವದಲ್ಲಿ ತಪಾಸಣೆ ನಡೆಯಿತು.




