ಇಂಡಿಗೋ ವಿಮಾನ ರದ್ದು ಹಿನ್ನಲೆಯಲ್ಲಿ ಅವಕಾಶ ದುರುಪಯೋಗ ಮಾಡಿಕೊಂಡ ಬೇರೆ ಏರ್ ಲೈನ್ಸ್ ಗಳು ತಮ್ಮ ವಿಮಾನ ಟಿಕೆಟ್ ದರವನ್ನು ಸಿಕ್ಕಾಪಟ್ಟೆ ಏರಿಕೆ ಮಾಡಿ ಭಾರಿ ಲಾಭ ಮಾಡಿಕೊಳ್ಳಲು ಹೊರಟಿವೆ.
ನಾಳೆ( ಭಾನುವಾರ) ಬೆಂಗಳೂರು- ದೆಹಲಿ ವಿಮಾನ ಟಿಕೆಟ್ ದರ ಕನಿಷ್ಠ 24.5 ಸಾವಿರ ರೂಪಾಯಿಯಿಂದ ಆರಂಭವಾಗುತ್ತೆ . ಬೆಂಗಳೂರು- ದೆಹಲಿಗೆ ಗರಿಷ್ಠ ವಿಮಾನ ಟಿಕೆಟ್ ದರ 39,719 ರೂಪಾಯಿಯವರೆಗೂ ಏರಿಕೆಯಾಗಿದೆ.

ಸಾಮಾನ್ಯ ದಿನಗಳಲ್ಲಿ ಬೆಂಗಳೂರು- ದೆಹಲಿ ಟಿಕೆಟ್ ದರ 5- 7 ಸಾವಿರ ರೂಪಾಯಿ ಇರುತ್ತೆ. ಗರಿಷ್ಠ ಅಂದರೂ 8 ಸಾವಿರ ರೂಪಾಯಿ ಮಾತ್ರ ಇರುತ್ತೆ. ಆದರೇ, ಇಂಡಿಗೋದಿಂದ ನಿತ್ಯ 500 ರಿಂದ 1000 ವಿಮಾನ ಸಂಚಾರ ರದ್ದು ಆಗುತ್ತಿರುವ ಹಿನ್ನಲೆಯಲ್ಲಿ ತಮ್ಮ ಏರ್ ಟಿಕೆಟ್ ದರವನ್ನು ಏರ್ ಇಂಡಿಯಾ ಮತ್ತು ಸ್ಪೈಸ್ ಜೆಟ್ , ಆಕಾಶ್ ಏರ್, ಅಲೈಯನ್ಸ್ ಏರ್ ಕಂಪನಿಗಳು ಏರಿಕೆ ಮಾಡಿವೆ.
ಡಿಜಿಸಿಎ ನಿಂದ ಈ ಪರಿಸ್ಥಿತಿಯಲ್ಲಿ ವಿಮಾನ ಟಿಕೆಟ್ ದರ ಏರಿಸದಂತೆ ಸೂಚನೆ ನೀಡಲಾಗಿದೆ. ಆದರೂ ವಿಮಾನ ಟಿಕೆಟ್ ದರ ಇಳಿಕೆಯಾಗಿಲ್ಲ. ಸಾಮಾನ್ಯ ದಿನಗಳ ದರದಲ್ಲೂ ಇಲ್ಲ .
ಇನ್ನೂ ನಾಳೆ(ಭಾನುವಾರ) ಚೆನ್ನೈ- ದೆಹಲಿ ಟಿಕೆಟ್ ದರ 20 ಸಾವಿರ ರೂಪಾಯಿಯಿಂದ ಆರಂಭವಾಗಿ ಗರಿಷ್ಠ 35,403 ರೂಪಾಯಿವರೆಗೂ ಏರಿಕೆ ಮಾಡಲಾಗಿದೆ.
ನಾಳೆ( ಭಾನುವಾರ, ಡಿಸೆಂಬರ್ 7) ದೆಹಲಿ- ಬೆಂಗಳೂರು ವಿಮಾನ ಟಿಕೆಟ್ ದರಗಳು 22, 736 ರೂಪಾಯಿಯಿಂದ ಆರಂಭವಾಗುತ್ತಾವೆ. ನಾಳೆ ದೆಹಲಿ- ಬೆಂಗಳೂರು ವಿಮಾನದ ಗರಿಷ್ಠ ಟಿಕೆಟ್ ದರ 39,101 ರೂಪಾಯಿ ಇದೆ. ಡಿಜಿಸಿಎ ಆದೇಶಕ್ಕೂ ಡೋಂಟ್ ಕೇರ್ ಎನ್ನುವ ನೀತಿಯನ್ನು ಏರ್ ಇಂಡಿಯಾ ಮತ್ತು ಸ್ಪೈಸ್ ಜೆಟ್ ಕಂಪನಿಗಳು ಅಳವಡಿಸಿಕೊಂಡಿವೆ. ಇದರಿಂದ ವಿಮಾನ ಪ್ರಯಾಣಿಕರಿಗೆ ಭಾರಿ ಹೊರೆಯಾಗುತ್ತಿದೆ.
ಇಂಡಿಗೋ ವಿಮಾನ ಸಂಚಾರ ಇನ್ನೂ 2 ದಿನದಲ್ಲಿ ಸಹಜ ಸ್ಥಿತಿಗೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಕೇಂದ್ರ ಸರ್ಕಾರ ಇದೆ. ಆದರೇ, ಇಂಡಿಗೋ ಸಿಇಓ ಪೀಟರ್ ಅಲ್ಬರ್ಸ್ ವಿಮಾನ ಸಂಚಾರ ಸಹಜ ಸ್ಥಿತಿಗೆ ಬರಲು ಡಿಸೆಂಬರ್ 15 ರವರೆಗೂ ಕಾಲಾವಕಾಶ ಬೇಕೆಂದು ಹೇಳಿದ್ದಾರೆ.
ಇಂಡಿಗೋ ಸಂಚಾರ ವ್ಯತ್ಯಯದಿಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಮಾನ ನಿಲ್ದಾಣಗಳಲ್ಲೇ ಪರದಾಡುತ್ತಿದ್ದಾರೆ.
ಇದು ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ ಎಂಬ ಪರಿಸ್ಥಿತಿಯನ್ನು ನೆನಪಿಸುತ್ತೆ. ಏರ್ ಲೈನ್ಸ್ ಗಳು ಜನರ ದುಡ್ಡಿನ ಜೊತೆ ಚೆಲ್ಲಾಟವಾಡುತ್ತಿವೆ. ಏರ್ ಲೈನ್ಸ್ ಗಳಿಗೆ ಚೆಲ್ಲಾಟ, ಜನರಿಗೆ ಪ್ರಾಣ ಸಂಕಟವನ್ನು ತಂದಿಟ್ಟಿವೆ.




