ಬೆಂಗಳೂರು: ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ದೋಷಾ ರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ವರದಿಗಳನ್ನಷ್ಟೆ ಕೋರ್ಟ್ಗೆ ಸಲ್ಲಿಸಲಾಗಿದೆ. ತನಿಖಾ ಹಂತದಲ್ಲಿರುವ ಪ್ರಕರಣದ ಬಗ್ಗೆ ಹೆಚ್ಚು ಚರ್ಚೆ ಮಾಡಲು ಆಗುವುದಿಲ್ಲ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಬೆಂಗಳೂರಿನ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ ನಾನಾಗಲಿ, ಮುಖ್ಯಮಂತ್ರಿಗಳಾಗಲಿ ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳಿಗೆ ಕರೆ ಮಾಡಿ ಮಾತಾಡಿಲ್ಲ. ಎಸ್ಐಟಿ ತಂಡಕ್ಕೆ ಸ್ವಾತಂತ್ರ್ಯವಾಗಿ ತನಿಖೆ ನಡೆಸಲು ಅನುಮತಿ ಕೊಟ್ಟಿದ್ದೇವೆ. ಈ ಪ್ರಕರಣದಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ತನಿಖೆ ಸೂಕ್ತವಾಗಿ ಸಾಗಬೇಕಿದೆ ಎಂದು ಹೇಳಿದರು.
ತನಿಖೆ ಎತ್ತ ಸಾಗುತ್ತದೆ ಕಾದು ನೋಡಿ
ಧರ್ಮಸ್ಥಳ ಪ್ರಕರಣದ ತನಿಖೆ ಸರಿಯಾಗಿ ಮಾಡಲಿಲ್ಲ ಎಂದಾದರೆ, ಪ್ರಕರಣದ ಬಗ್ಗೆ ಸೂಕ್ತ ಮಾಹಿತಿ ಒದಗಿಸದಿದ್ದಾಗ, ಸರಿಯಾದ ತನಿಖೆ ನಡೆಯದಿದ್ದಾಗ ಕೋರ್ಟ್ ತಡೆ ನೀಡುತ್ತದೆ. ಧರ್ಮಸ್ಥಳ ಪ್ರಕರಣದಲ್ಲಿ ಇನ್ನೂ ತನಿಖೆ ಮುಗಿದಿಲ್ಲ. ಮುಂದೆ ತನಿಖೆ ಎತ್ತ ಸಾಗುತ್ತದೆ ಎಂಬುದನ್ನು ಕಾದು ನೋಡಿ. ಚಾರ್ಜ್ ಶೀಟ್ ಕೊಟ್ಟ ಕೂಡಲೇ ಪ್ರಕರಣ ಮುಗಿದಿದೆ ಎಂದರ್ಥವಲ್ಲ. ತನಿಖೆ ಮಾಡಿದಾಗ ಬುರುಡೆ ಸಹಿತ ಪ್ರಕರಣಗಳಲ್ಲಿ ಯಾರ್ಯಾರು ಶಾಮೀಲಾಗಿದ್ದಾರೆ ಎಂಬಿತ್ಯಾದಿ ವಿಷಯಗಳನ್ನು ಸಂಗ್ರಹಿಸಿ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದರು.




