ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ‘ಪ್ರಧಾನ್ ಮಂತ್ರಿ ಉಜ್ವಲ ಯೋಜನೆ’ಯ (PMUY) ಫಲಾನುಭವಿಗಳಿಗೆ ಕೇಂದ್ರ ಸರ್ಕಾರವು ಭಾರಿ ಆಘಾತ ನೀಡಿದೆ.

ಉಜ್ವಲ ಯೋಜನೆಯಡಿ ಗ್ರಾಹಕರಿಗೆ ವಾರ್ಷಿಕವಾಗಿ ಸಿಗುತ್ತಿದ್ದ ಸಬ್ಸಿಡಿ ಅಡುಗೆ ಅನಿಲ (LPG) ಸಿಲಿಂಡರ್ಗಳ ಸಂಖ್ಯೆಯನ್ನು ಕೇವಲ 4ಕ್ಕೆ ಕಡಿತಗೊಳಿಸಲಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಬಡ ಕುಟುಂಬಗಳ ಸರಾಸರಿ ವಾರ್ಷಿಕ ಸಿಲಿಂಡರ್ ಬಳಕೆಯನ್ನು ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.
12 ರಿಂದ 4 ಕ್ಕೆ ಇಳಿಕೆ!
2016 ರ ಮೇ ತಿಂಗಳಲ್ಲಿ ಬಡ ಕುಟುಂಬಗಳ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸಲಾಗಿತ್ತು.
ಪ್ರಾರಂಭದಲ್ಲಿ ಫಲಾನುಭವಿಗಳಿಗೆ ವರ್ಷಕ್ಕೆ 12 ಸಬ್ಸಿಡಿ ಸಿಲಿಂಡರ್ಗಳನ್ನು ನೀಡಲಾಗುತ್ತಿತ್ತು. ಆದರೆ, ಕಳೆದ ವರ್ಷವಷ್ಟೇ ಈ ಕೋಟಾವನ್ನು 9 ಕ್ಕೆ ಇಳಿಸಿದ್ದ ಕೇಂದ್ರ ಸರ್ಕಾರ, ಈಗ ಅದನ್ನು ಮತ್ತಷ್ಟು ಕಡಿತಗೊಳಿಸಿ ಕೇವಲ 4 ಸಿಲಿಂಡರ್ಗಳಿಗೆ ಸೀಮಿತಗೊಳಿಸಿದೆ.
ಸಬ್ಸಿಡಿ ಎಷ್ಟು? ಈಗಿನ ಬೆಲೆ ಎಷ್ಟು?
ಕೇಂದ್ರ ಸರ್ಕಾರವು ಉಜ್ವಲ ಗ್ರಾಹಕರಿಗೆ ಪ್ರತಿ 14.2 ಕೆಜಿ ಸಿಲಿಂಡರ್ ಮೇಲೆ ₹300 ನೇರ ನಗದು ಸಬ್ಸಿಡಿಯನ್ನು (DBT) ಮುಂದುವರಿಸಿದೆ. ಆದರೆ, ಇನ್ನು ಮುಂದೆ ವರ್ಷದಲ್ಲಿ ಕೇವಲ ಮೊದಲ 4 ಸಿಲಿಂಡರ್ ರೀಫಿಲ್ಗಳಿಗೆ ಮಾತ್ರ ಈ ಸಬ್ಸಿಡಿ ಲಭ್ಯವಿರಲಿದ್ದು, ಗರಿಷ್ಠ ವಾರ್ಷಿಕ ಸಬ್ಸಿಡಿ 1,200 ಕ್ಕೆ ಮಿತಿಗೊಳ್ಳಲಿದೆ.
ದೆಹಲಿಯಲ್ಲಿ ಪ್ರಸ್ತುತ ದರ: ಕಳೆದ ಮೂರು ತಿಂಗಳಲ್ಲಿ ಎರಡು ಬಾರಿ ಬೆಲೆ ಏರಿಕೆಯಾಗಿದ್ದು (ಜೂನ್ 7 ರಂದು ₹29 ಏರಿಕೆ ಸೇರಿದಂತೆ), ಒಟ್ಟು 89 ಹೆಚ್ಚಳವಾಗಿದೆ. ಪ್ರಸ್ತುತ ದೆಹಲಿಯಲ್ಲಿ ಸಾಮಾನ್ಯ ಗ್ರಾಹಕರಿಗೆ ಸಿಲಿಂಡರ್ ದರ 942 ಆಗಿದೆ.
ಉಜ್ವಲ ಗ್ರಾಹಕರಿಗೆ ದರ: 300 ಸಬ್ಸಿಡಿ ಕಡಿತದ ನಂತರ ಉಜ್ವಲ ಫಲಾನುಭವಿಗಳು 642 ಪಾವತಿಸಬೇಕಾಗುತ್ತದೆ (ಮೊದಲ 4 ಸಿಲಿಂಡರ್ಗಳಿಗೆ ಮಾತ್ರ).
ಮಧ್ಯಪ್ರಾಚ್ಯದಲ್ಲಿ ಫೆಬ್ರವರಿ ಕೊನೆಯಲ್ಲಿ ಭುಗಿಲೆದ್ದ ಯುದ್ಧದ ಕಾರಣದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್ಪಿಜಿ ಬೆಲೆ ತೀವ್ರವಾಗಿ ಏರಿಕೆಯಾಗಿದೆ.
ತೈಲ ಕಂಪನಿಗಳಿಗೆ ಭಾರಿ ನಷ್ಟ
ಬೆಲೆ ಏರಿಕೆಯ ಹೊರತಾಗಿಯೂ ತೈಲ ಕಂಪನಿಗಳು ಪ್ರತಿ ಸಿಲಿಂಡರ್ ಮೇಲೆ ಸುಮಾರು 700 ರಷ್ಟು ನಷ್ಟ ಅನುಭವಿಸುತ್ತಿವೆ. ಇದರೊಂದಿಗೆ ಪೆಟ್ರೋಲ್ ಮೇಲೆ ಪ್ರತಿ ಲೀಟರ್ಗೆ 6 ಹಾಗೂ ಡೀಸೆಲ್ ಮೇಲೆ ಪ್ರತಿ ಲೀಟರ್ಗೆ 30 ರಷ್ಟು ನಷ್ಟವಾಗುತ್ತಿದ್ದು, ಒಟ್ಟಾರೆಯಾಗಿ ತೈಲ ಕಂಪನಿಗಳು ದಿನಂಪ್ರತಿ 600 ರಿಂದ 700 ಕೋಟಿ ನಷ್ಟ ಅನುಭವಿಸುತ್ತಿವೆ. ಇದೇ ಕಾರಣಕ್ಕಾಗಿ ಕಳೆದ ತಿಂಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು 7.50 ಹಾಗೂ ಸಿಎನ್ಜಿ ದರವನ್ನು 6 ರಷ್ಟು ಹೆಚ್ಚಿಸಲಾಗಿತ್ತು ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.




