
ಕಾರ್ಗಿಲ್ ಯುದ್ಧಕ್ಕೆ ಇಂದಿಗೆ 25ನೇ ವರ್ಷ . ಪಾಕಿಸ್ತಾನ ಸೈನಿಕರ ಹುಟ್ಟುಡಗಿಸಿ ಭಾರತೀಯ ಸೈನಿಕರು ವಿಜಯ ಪತಾಕೆ ಹಾರಿಸಿದ ದಿನ. ಭಾರತೀಯರು ಎಂದು ಮರೆಯದ ಅವಿಸ್ಮರಣೀಯ ದಿನಗಳಲ್ಲಿ ಜುಲೈ 26 ಕೂಡಾ ಒಂದಾಗಿದೆ. ಪ್ರತಿ ವರ್ಷ ಈ ದಿನವನ್ನು ಕಾರ್ಗಿಲ್ ವಿಜಯ್ ದಿವಸ್ ಎಂದು ಯುದ್ದದ ಯಶಸ್ಸಿನ ಸ್ಮರಣಾರ್ಥಕವಾಗಿ ಆಚರಿಸಲಾಗುತ್ತದೆ. ಕಾರ್ಗಿಲ್ ವಿಜಯ್ ದಿವಸ್ ಅನ್ನು ಕಾರ್ಗಿಲ್ ಯುದ್ಧ ವೀರರ ಗೌರವಾರ್ಥವಾಗಿ ಆಚರಿಸಲಾಗುತ್ತಿದೆ.
1999ರ ಮೇ ತಿಂಗಳಲ್ಲಿ ಆರಂಭವಾದ ಈ ಯುದ್ದ ಭಾರತ ಕ್ಕೆ ಆಶ್ಚರ್ಯವನ್ನುಂಟು ಮಾಡಿತ್ತು. ಭಾರತೀಯ ವೀರ ಯೋಧರ ಸೇನೆಯು ಯಾವುದೇ ಆತಂಕಕ್ಕೆ ಒಳ ಗಾಗದೇ ಪಾಕಿಸ್ತಾನವನ್ನು ಸದೆ ಬಡೆದು ಅವರು ಆಕ್ರಮಿಸಿಕೊಂಡಿದ್ದ ಜಾಗವನ್ನು ವಶಕ್ಕೆ ಪಡೆಯಿತು. ಈ ಯುದ್ಧದಲ್ಲಿ ಭಾರತೀಯ ಸೇನೆಯ ಅಧಿಕಾರಿಗಳು ಸೇರಿದಂತೆ ಸುಮಾರು 527 ಭಾರತೀಯ ಯೋಧರು ವೀರ ಮರಣವನ್ನು ಹೊಂದಿದರು.
ಪಾಕಿಸ್ತಾನದ ಕುತಂತ್ರ ಬುದ್ದಿ.
ಚಳಿಗಾಲದಲ್ಲಿ ಕಾಶ್ಮೀರದ ಪರ್ವತ ಪ್ರದೇಶದಲ್ಲಿ ರಾತ್ರಿ ಕಡುಶೀತ ವಾತಾವರಣವಿರುತ್ತದೆ.ಮೈಕೊರೆಯುವಂತಹ ಚಳಿ ಅಲ್ಲಿ ಇರುತ್ತದೆ. 10 ಡಿಗ್ರಿ ತಾಪಮಾನಕ್ಕೆ ಚಳಿಯೆಂದು ನಾವುಗಳು ಒದ್ದಾಡುತ್ತೇವೆ. ಆದರೆ ನಮ್ಮ ಸೈನಿಕರು ಇರುವ ಆ ಪ್ರದೇಶದಲ್ಲಿ ಮೈನಸ್ ಡಿಗ್ರಿ ಚಳಿಯಿರುತ್ತದೆ. ಈ ಮೈ ಕೊರೆಯುವ ಚಳಿಯಿರುವಾಗ ಗಡಿ ನಿಯಂತ್ರಣ ರೇಖೆಯ ಆಯ ಬದಿಗಳಲ್ಲಿ ಕೆಲವು ಶಿಬಿರಗಳನ್ನು ಭಾರತ ಪಾಕಿಸ್ತಾನ, ತೊರೆಯುವುದು ವಾಡಿಕೆ. ಆದರೆ 1999ರ ಫೆಬ್ರವರಿ ತಿಂಗಳಿನಲ್ಲಿ ಪಾಕಿಸ್ತಾನ ಸೇನೆಯು ತನ್ನ ಕುತಂತ್ರ ಬುದ್ಧಿ ಉಪಯೋಗಿಸಿ. ಗಡಿ ನಿಯಂತ್ರಣ ರೇಖೆಯ ಭಾರತದ ಬದಿಯಲ್ಲಿರುವ ಶಿಬಿರಗಳ ಮೇಲೆ ದಾಳಿ ನಡೆಸಲು ತನ್ನ ಪಡೆಗಳನ್ನು ಕಳಿಸಿತು. ಇದು ಭಾರತ-ಪಾಕ್ ಯುದ್ಧಕ್ಕೆ ನಾಂದಿ ಹಾಡಿತು.





