ಮಂಗಳೂರು: ಪುತ್ತೂರಿನ ಕೃಷ್ಣ ಜೆ.ರಾವ್ ಯುವತಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪರ ವಕೀಲರ ಮನವಿಯಂತೆ ಜೂ.19ಕ್ಕೆ ರಾಜಿಸಂಧಾನ ನಿಗದಿಯಾಗಿದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ.ನಂಜುಂಡಿ ಶುಕ್ರವಾರ(ಜೂ12) ಹೇಳಿಕೆ ನೀಡಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ “ಯುವತಿಯನ್ನು ಕೃಷ್ಣ ರಾವ್ ಹೆತ್ತವರು ಮನೆತುಂಬಿಸಿಕೊಳ್ಳುವ ವಿಶ್ವಾಸವಿದೆ ಯುವಕ-ಯುವತಿ ಇಬ್ಬರಿಂದಲೂ ಸಮಾನ ತಪ್ಪಾಗಿದೆ. ಯುವತಿಯನ್ನು ಮದುವೆಯಾಗಬೇಕು, ಅವರ ಸಂಸಾರ ಚೆನ್ನಾಗಿರಬೇಕು. ಹಣಕ್ಕಿಂತ ಜೀವನ ಮುಖ್ಯ. ಪ್ರಕರಣ ವಿವಾಹದೊಂದಿಗೆ ಸುಖಾಂತ್ಯವಾಗುವ ವಿಶ್ವಾಸವಿದೆ” ಎಂದು ಹೇಳಿದ್ದಾರೆ.
ಕೃಷ್ಣ ಜೆ.ರಾವ್ ವಿರುದ್ಧ ದಾಖಲಾಗಿರುವ ಪ್ರೀತಿಸಿ ಮಗು ನೀಡಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ (ಜೂ.10) ಹೈಕೋರ್ಟ್ ಹೈಕೋರ್ಟ್ ಪೀಠ, ರಾಜಿ ಸಂಧಾನದ ಮೂಲಕ ವಿವಾದ ಇತ್ಯರ್ಥಪಡಿಸಿಕೊಳ್ಳುವಂತೆ ಸೂಚನೆ ನೀಡಿತ್ತು. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ಮುಂದೆ ಅರ್ಜಿದಾರರ ಪರ ಹಿರಿಯ ವಕೀಲ ಪಿ.ಪಿ. ಹೆಗ್ಡೆ ಅವರು ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳುವ ಕುರಿತು ಕೋರ್ಟ್ ಮುಂದೆ ಪ್ರಸ್ತಾಪಿಸಿದ್ದರು. ಅದನ್ನು ಪುರಸ್ಕರಿಸಿದ ಪೀಠ, ಬರುವ ಜೂನ್ 19 ರಂದು ಸಂತ್ರಸ್ತೆ, ಆರೋಪಿ ಹಾಗೂ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲಾ ವ್ಯಕ್ತಿಗಳು ಕಡ್ಡಾಯವಾಗಿ ಮಧ್ಯಸ್ಥಿಕೆ ಕೇಂದ್ರಕ್ಕೆ (Mediation Centre) ಹಾಜರಾಗಬೇಕು ಎಂದು ಸೂಚನೆ ನೀಡಿದೆ.
ಹಣ ಪಾವತಿಗೆ ಗಡುವು
ಹೈಕೋರ್ಟ್ ಹಿಂದಿನ ಸೂಚನೆಯಂತೆ ಆರೋಪಿ ಕೃಷ್ಣ ಜೆ. ರಾವ್ ಮೊದಲ ತಿಂಗಳ 75 ಸಾವಿರ ರೂಪಾಯಿಗಳನ್ನು ಕೋರ್ಟ್ನಲ್ಲಿ ಠೇವಣಿ ಇಟ್ಟಿದ್ದರು. ಈ ಠೇವಣಿ ಇಟ್ಟ ಹಣವನ್ನು ತತ್ ಕ್ಷಣವೇ ಸಂತ್ರಸ್ತೆಗೆ ಪಾವತಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಇದರ ಜತೆಗೆ, ಮುಂದಿನ 4 ದಿನಗಳ ಒಳಗಾಗಿ ಎರಡನೇ ತಿಂಗಳ 75 ಸಾವಿರ ರೂಪಾಯಿಗಳನ್ನು ಪಾವತಿಸುವಂತೆ ಆರೋಪಿಗೆ ಸೂಚಿಸಿದೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ಹೈಕೋರ್ಟ್ ಜೂನ್ 30ಕ್ಕೆ ಮುಂದೂಡಿದೆ. ಮಧ್ಯಸ್ಥಿಕೆ ಕೇಂದ್ರದಲ್ಲಿ ನಡೆಯುವ ಸಂಧಾನದ ವರದಿಯ ಆಧಾರದ ಮೇಲೆ ಮುಂದಿನ ಕಾನೂನು ಪ್ರಕ್ರಿಯೆಗಳು ನಿರ್ಧಾರವಾಗಲಿವೆ.




