ಪಟ್ಟಣಂತಿಟ್ಟ: ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ನಡೆದಿದೆಯೆನ್ನಲಾದ ಚಿನ್ನ ಕಳ್ಳತನ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಭಾನುವಾರ ಆರಂಭಿಸಿದೆ.

ಎಸ್.ಶಶಿಧರನ್ ನೇತೃತ್ವದ ಅಧಿಕಾರಿಗಳ ತಂಡ, ದೇವಸ್ಥಾನದ ಗರ್ಭಗುಡಿಯ ಪ್ರವೇಶದ್ವಾರದ ಬಾಗಿಲಿನ ಕವಚ, ಪ್ರವೇಶದ್ವಾರದ ಇಕ್ಕೆಲಗಳಲ್ಲಿರುವ ಮೂರ್ತಿಗಳ ಮೇಲಿನ ಕವಚ, ಗರ್ಭಗುಡಿಯ ಮೇಲ್ಪಾವಣಿಯ ಒಳಭಾಗಕ್ಕೆ ಒದಗಿಸಲಾಗಿರುವ ಸ್ವರ್ಣಕವಚಗಳಿಂದ ಸ್ಯಾಂಪಲ್ಗಳನ್ನು ಪಡೆದುಕೊಂಡಿತು.
ಈ ನಮೂನೆಗಳನ್ನು ಪಡೆಯಲು ಮಾಪನಶಾಸ್ತ್ರ ಇಲಾಖೆಯ ಸಿಬ್ಬಂದಿ ಹಾಗೂ ಕಾನೂನಾತ್ಮಕ ಅನುಮೋದನೆ ಪಡೆದಿರುವ ಪರಿಣಿತನ್ನು ಬಳಸಿಕೊಳ್ಳಲಾಯಿತು. ಇಲ್ಲಿ ಸಂಗ್ರಹಿಸಲಾಗಿರುವ ನಮೂನೆಗಳನ್ನು ವೈಜ್ಞಾನಿಕ ಸಂಶೋಧನೆಗಳೊಳಪಡಿಸಲಾಗಿದ್ದು, ಇನ್ನೆರಡು ದಿನಗಳಲ್ಲಿ ಫಲಿತಾಂಶ ಬರಬಹುದು ಎಂದು ನಿರೀಕ್ಷಿಸಲಾಗಿದೆ.




