ಆಂಬುಲೆನ್ಸ್‌ ಸಿಗದೆ ಪರದಾಟ…ಆಟೋರಿಕ್ಷಾದಲ್ಲೇ 4 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!

Share with

ನಾಲ್ಕೂ ನವಜಾತ ಶಿಶುಗಳು ಸಾವು!

ಮಂಡ್ಲಾ (ಮಧ್ಯಪ್ರದೇಶ): ಆಂಬುಲೆನ್ಸ್ ಸಕಾಲಕ್ಕೆ ಸಿಗದೆ ಗರ್ಭಿಣಿಯೊಬ್ಬರು ಆಟೋರಿಕ್ಷಾದಲ್ಲೇ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದು, ದುರದೃಷ್ಟವಶಾತ್ ಜನಿಸಿದ ಕೆಲವೇ ಕ್ಷಣಗಳಲ್ಲಿ ನಾಲ್ಕೂ ನವಜಾತ ಶಿಶುಗಳು ಕೊನೆಯುಸಿರೆಳೆದಿರುವ ಅತ್ಯಂತ ಕರುಣಾಜನಕ ಘಟನೆ ಮಧ್ಯಪ್ರದೇಶದ ಮಂಡ್ಲಾ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.

ಸಕಾಲಕ್ಕೆ ಆಂಬುಲೆನ್ಸ್ ಬಾರದೇ ಇದ್ದದ್ದೇ ಮಕ್ಕಳ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಆದರೆ, ತಾಯಿ ಏಳನೇ ತಿಂಗಳಿಗೇ ಅಕಾಲಿಕ ಹೆರಿಗೆಯಾಗಿದ್ದರಿಂದ ಮತ್ತು ಮಕ್ಕಳ ದೇಹ ಪೂರ್ಣವಾಗಿ ಬೆಳವಣಿಗೆಯಾಗದ ಕಾರಣ ಶಿಶುಗಳು ಮೃತಪಟ್ಟಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.

ಮಂಡ್ಲಾ ಜಿಲ್ಲೆಯ ನೈಗಾಂವ್(Naigaon) ನಿವಾಸಿ ರಜನಿ ಸಿಂಗ್ರಾಮ್ ಎಂಬುವವರಿಗೆ ಏಳನೇ ತಿಂಗಳ ಗರ್ಭಾವಸ್ಥೆಯಲ್ಲಿ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಕುಟುಂಬಸ್ಥರು ಸರ್ಕಾರಿ ತುರ್ತು ಆಂಬುಲೆನ್ಸ್ ಸೇವೆಗೆ ಕರೆ ಮಾಡಿದ್ದರು. ಆದರೆ ಎಷ್ಟು ಕಾದರೂ ಆಂಬುಲೆನ್ಸ್ ಮಾತ್ರ ಬರಲೇ ಇಲ್ಲ. ಇದರಿಂದ ಕಂಗಾಲಾದ ಕುಟುಂಬಸ್ಥರು ರಜನಿ ಅವರನ್ನು ಖಾಸಗಿ ವಾಹನದ ಮೂಲಕ ಮೊದಲು ಗುಥಾಸ್(Ghuthas)ನಲ್ಲಿರುವ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಮಹಿಳೆಯ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದ್ದರಿಂದ ವೈದ್ಯರು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಿಚ್ಚಿಯಾ(Bichhiya)ದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವಂತೆ ಸೂಚಿಸಿದರು.

ಈ ಹಂತದಲ್ಲೂ ಆಂಬುಲೆನ್ಸ್ ಸಿಗದ ಕಾರಣ ಅನಿವಾರ್ಯವಾಗಿ ಗರ್ಭಿಣಿಯನ್ನು ಆಟೋರಿಕ್ಷಾದಲ್ಲಿ ಬಿಚ್ಚಿಯಾ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ದಾರಿ ಮಧ್ಯೆ ಆಟೋರಿಕ್ಷಾದಲ್ಲೇ ರಜನಿ ಅವರು ನಾಲ್ಕು ಮಕ್ಕಳಿಗೆ (ಮೂರು ಹೆಣ್ಣು ಮತ್ತು ಒಂದು ಗಂಡು ಮಗು) ಜನ್ಮ ನೀಡಿದ್ದಾಳೆ. ಮಕ್ಕಳು ಅವಧಿಗೂ ಮುನ್ನವೇ ಜನಿಸಿದ್ದರಿಂದ ಹಾಗೂ ತೂಕ ಕೇವಲ 1.5 ಕೆ.ಜಿ ಇದ್ದ ಕಾರಣ ಸಂಪೂರ್ಣವಾಗಿ ಅಂಗಾಂಗ ಬೆಳವಣಿಗೆಯಾಗದೆ ಮೃತಪಟ್ಟಿವೆ. ಸದ್ಯ ತಾಯಿಯ ಆರೋಗ್ಯ ಸ್ಥಿರವಾಗಿದ್ದು, ಬಿಚ್ಚಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಂದು ಜಿಲ್ಲಾ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ. ಡಿ. ಜೆ. ಮೊಹಂತಿ ತಿಳಿಸಿದ್ದಾರೆ.

ಈ ಘಟನೆಯ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಹಿಳೆಯ ಪತಿ ಗಣೇಶ್ ಸಿಂಗ್ರಾಮ್, ಸರ್ಕಾರಿ ಆಂಬುಲೆನ್ಸ್ ವ್ಯವಸ್ಥೆ ಸಕಾಲಕ್ಕೆ ಲಭ್ಯವಾಗಿದ್ದರೆ ತಮ್ಮ ನಾಲ್ಕು ಮಕ್ಕಳನ್ನು ಬದುಕಿಸಿಕೊಳ್ಳಬಹುದಿತ್ತು ಎಂದು ಕಣ್ಣೀರು ಹಾಕಿದ್ದಾರೆ. ಈ ಇಡೀ ಕರುಣಾಜನಕ ಘಟನೆ ಮತ್ತು ಕುಟುಂಬಸ್ಥರ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಮಂಡ್ಲಾ ಜಿಲ್ಲಾಧಿಕಾರಿ ರಾಹುಲ್ ನಾಮದೇವ್ ಧೋತೆ, ಈ ವಿಷಯವಾಗಿ ತಮಗೆ ಇನ್ನೂ ಯಾವುದೇ ಲಿಖಿತ ದೂರು ಬಂದಿಲ್ಲ ಎಂದಿದ್ದಾರೆ. ಒಂದು ವೇಳೆ ಕುಟುಂಬಸ್ಥರಿಂದ ಅಧಿಕೃತ ದೂರು ಬಂದರೆ, ಇಡೀ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.


Share with

Leave a Reply

Your email address will not be published. Required fields are marked *