ಪುತ್ತೂರು: ಪಡೀಲ್ ಬಳಿ ಎರಡು ಬೈಕ್ಗಳ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಏ.18ರಂದು ನಡೆದಿದೆ.

ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೆಳ್ಳಿಪ್ಪಾಡಿ ಕೊಡಿಮರದ ವಿಶ್ವನಾಥ ಪೂಜಾರಿ ಅವರ ಮಗ ಧನರಾಜ್(21.ವ) ಮೃತಪಟ್ಟ ವ್ಯಕ್ತಿ. ಧನು ಅವರು ಸ್ನೇಹಿತರ ಜೊತೆ ಸೇರಿ ಪುತ್ತೂರು ಜಾತ್ರೆಯ ಗದ್ದೆಯಲ್ಲಿ ಆಹಾರ ಸ್ಟಾಲ್ ಹಾಕಿದ್ದರು. ನಿನ್ನೆ ಮುರ ಬಳಿಯ ಸ್ನೇಹಿತನ ಮನೆಯಲ್ಲೇ ತಂಗಿದ್ದ ಧನು ಇಂದು ಬಟ್ಟೆ ಬದಲಾಯಿಸಿ ಸ್ಟಾಲ್ ಗೆ ತೆರಳಲು ಮನೆಗೆ ಕಡೆಗೆ ಬೈಕ್ ನಲ್ಲಿ ಹೋಗುತ್ತಿದ್ದರು.

ಘಟನೆ ವಿವರ:
ಧನರಾಜ್ ಚಲಾಯಿಸುತ್ತಿದ್ದ ಬೈಕ್ ಪುತ್ತೂರಿನಿಂದ ಉಪ್ಪಿನಂಗಡಿ ಕಡೆಗೆ,ಸಹಸವಾರ ಸೇರಿದಂತೆ ಇಬ್ಬರಿದ್ದ ಬೈಕ್ ಉಪ್ಪಿನಂಗಡಿಯಿಂದ ಪುತ್ತೂರಿಗೆ ಬರುತ್ತಿದ್ದ ವೇಳೆ, ಉಪ್ಪಿನಂಗಡಿಗೆ ತೆರಳುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಪಕ್ಕದಲ್ಲಿದ್ದ ಡಿವೈಡರ್ ಗೆ ಡಿಕ್ಕಿ ಹೊಡೆದು ಇನ್ನೊಂದು ಭಾಗದಲ್ಲಿ ಪುತ್ತೂರಿನ ಕಡೆಗೆ ಸಾಗುತ್ತಿದ್ದ ಬೈಕ್ ಗೆ ಡಿಕ್ಕಿಯಾಗಿ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಬಡಿದ ಪರಿಣಾಮ ಬೈಕ್ ಸವಾರನ ತಲೆಗೆ ತೀವ್ರತರವಾದ ಗಾಯವಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನೊಂದು ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಗಾಯಗಳಾಗಿದ್ದು, ತಕ್ಷಣ ಅವರನ್ನು ಸ್ಥಳೀಯರ ಸಹಕಾರದೊಂದಿಗೆ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ.




